Showing posts with label ಕರ್ನಾಟಕ ಮಲ್ಲ. Show all posts
Showing posts with label ಕರ್ನಾಟಕ ಮಲ್ಲ. Show all posts

Thursday, 4 April 2013

ಪೀಠಿಕೆ

ಎ  ವರ್ಷಗಳ ಮುನ್ನ ದಿ. ಎಂ ಮಲ್ಲಿಕಾರ್ಜುನಯ್ಯನವರ (ಡಬ್ಬಲ್ಲೆಂ) ನೇತೃತ್ವದಲ್ಲಿ ದಿನಪತ್ರಿಕೆ 'ಕರ್ನಾಟಕ ಮಲ್ಲ’ ಮುಂಬಯಿ ಕನ್ನಡಿಗರ ನಡುವೆ ಜನಜನಿತವಾಗಿತ್ತು.  ಷ್ಟೋ


ಆಗ್ಗೆ ಸಂಸ್ಥೆ Bombay Architectural Consultants ಅಧೀನದಲ್ಲಿ ಮು೦ಬಯಿಯ ಸುತ್ತಮುತ್ತ ನಿರ್ಮಾಣವಾಗುತ್ತಿದ್ದ ಕಟ್ಟಡಗಳ ಮೇಲುಸ್ತುವಾರಿಗೆ ನಾನು ನೇಮಿಸಲ್ಪಟ್ಟಿದ್ದೆ. ವೃತ್ತಿಶಃ ಸಿವಿಲ್ ಇಂಜಿನಿಯರ್ ಆಗಿದ್ದ ನಾನು ಬರವಣಿಗೆ ಗೀಳಿನ ಮನುಷ್ಯನೆಂಬುದನ್ನು ಅರಿತಿದ್ದ ಡಬ್ಬಲ್ಲೆಂ, 'ನಿನ್ನ ವೃತ್ತಿಯ ವಿಷಯವೇ ಆಗಿದ್ದರೂ ಸರಿ, ನಮ್ಮ ಪತ್ರಿಕೆಗೆ ಏನಾದರೂ ರೆಗ್ಯುಲರ್ ಆಗಿ ಬರಿ’ ಎಂದು ಆದೇಶಿಸಿದರು. 'ಕರ್ನಾಟಕ ಮಲ್ಲ’ದಲ್ಲಿ ನನ್ನ ಕೆಲವು ವಾರದ ಕತೆಗಳು ಪ್ರಕಟವಾದ ನಂತರ ದೊರೆತ ಪ್ರತಿಕ್ರಿಯೆ ಅದಾಗಿತ್ತು.

ಅಂಥದೇ ಪ್ರತಿಕ್ರಿಯೆ ಆ ದಿನಗಳಲ್ಲಿ 'ಉದಯವಾಣಿ’ ಮ್ಯಾಗಜಿನ್ ವಿಭಾಗದ ಸಂಪಾದಕರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರಿಂದಲೂ ವ್ಯಕ್ತವಾಗಿತ್ತು. 'ಉದಯವಾಣಿ’ಯಲ್ಲಿ ಪ್ರಕಟವಾದ ನನ್ನ ಸಣ್ಣ ಕತೆಗಳಿಗೆ ಸಂಭಾವನೆ, ಈಗ ಬಹಳ ದೊಡ್ಡ ಮನುಷ್ಯರಾಗಿರುವ ಈಶ್ವರ ದೈತೋಟರ ಕವರಿಂಗ್ ಲೆಟರ್ ಸಮೇತ ನನಗೆ ಪ್ರಾಪ್ತವಾಗುತ್ತಿತ್ತು.


ಡಬ್ಬಲ್ಲೆಂ ಮತ್ತು ಬನ್ನಂಜೆಯಂಥ ಧೀಮಂತರ 'ಏನಾದರೂ ರೆಗ್ಯುಲರ್ ಆಗಿ ಬರಿ’ ಎಂಬ ಆದೇಶ, ನನ್ನ ಮನದೊಳಗನ್ನು ಮರಕುಟುಕನ ಥರ ಪದೇಪದೇ ಚುಚ್ಚಿದ ಅನುಭವವಾಯಿತು. ಒಂದು ದಿನ ಸಂಜೆ, ಅಂದಿನ ಸಂದರ್ಭಕ್ಕೆ ಅನ್ವಯಿಸುತ್ತಿದ್ದ ೫೦೦ ಪದಗಳಿದ್ದ  ಒಂದು ಲೇಖನದೊಂದಿಗೆ, ಮುಂಬಯಿ ಕೋಟೆ ಪ್ರದೇಶದಲ್ಲಿ ಫ಼್ಲೋರಾ ಫೌಂಟನ್ ಸಮೀಪದಲ್ಲಿದ್ದ 'ಕರ್ನಾಟಕ ಮಲ್ಲ’ ಕಛೇರಿಯಲ್ಲಿ ಹಾಜರಾದೆ. ನಿಗದಿತ ಸಮಯವಾದ್ದರಿಂದ ಡಬ್ಬಲ್ಲೆಂ ನನಗೋಸ್ಕರ ಕಾಯುತ್ತಿದ್ದರು.

ಆ ಲೇಖನದೊಂದಿಗೆ ನನ್ನ ಅಂಕಣ 'ರಂಗನ ದಿನಚರಿ’ ಮೊದಲಿಟ್ಟಿತು. ಮುಂಬಯಿ ಟೆನ್ಯೂರ್ ಮುಕ್ತಾಯಗೊಳಿಸಿ ನಾನು ಬೆಂಗಳೂರಿಗೆ ಹಿಂದಿರುಗಿದ ನಂತರ 'ನಿನ್ನ ಅಂಕಣ ಭಾರೀ ಸದ್ದು ಮಾಡುತ್ತಿದೆ’ ಎಂದು ಆಗಾಗ್ಗೆ ಡಬ್ಬಲ್ಲೆಂ ಹೇಳುತ್ತಿದ್ದುದುಂಟು. ಆದೇ ವಿಶ್ವಾಸದಿಂದ, ಅವರುಬೆಂಗಳೂರಿನಲ್ಲಿ ಆಂಗ್ಲ ಮಾಧ್ಯಾಹ್ನಿಕ 'ಸಿಟಿ ಟುಡೇ' ಆರಂಭಿಸಿದಾಗ ನನಗೆ ಸಲಹೆಗಾರನ ಕಾರ್ಯಭಾರವನ್ನು ವಹಿಸಿದ್ದರು.

'ರಂಗನ ದಿನಚರಿ’ಯನ್ನು ಬೀದರ್ ಮೂಲದ, ಶಕುಂತಲಾ ಟ್ರಾವಲ್ಸ್ ಮಾಲೀಕತ್ವದ  'ಉತ್ತರ ಕರ್ನಾಟಕ’ ದಿನಪತ್ರಿಕೆಯ ಬೆಂಗಳೂರು ಆವೃತ್ತಿ ಚಾಲನೆಯಲ್ಲಿದ್ದಾಗ ಪುನರಾರಂಭಿಸಿದ್ದೆ. ಆ ಆವೃತ್ತಿ ಸ್ಥಗಿತಗೊಂಡಾಗ, ನನ್ನ ಸಿವಿಲ್ ಇಂಜಿನಿಯರಿಂಗ್ ಚಟುವಟಿಕೆ ಹೆಚ್ಚಾಗಿದ್ದ ನಿಮಿತ್ತ ಬೇರೆ ಪತ್ರಿಕೆಯ ಕಡೆಗೆ ಸಾಗದೆ, ಸ್ವಲ್ಪ ಸಮಯ ನನ್ನ ಅಂಕಣ ನೇಪಥ್ಯದಲ್ಲಿರಲೆಂದು ತೀರ್ಮಾನಿಸಿ ಸುಮ್ಮನಿದ್ದೆ.


ಇತ್ತೀಚೆಗೆ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ’ಗುಡ್ ಬೈ’ ಹೇಳಿ, ಪೂಜ್ಯ ಗುರೂಜಿ ಶ್ರೀ ಶ್ರೀ ರವಿಶಂಕರ್ ಅವರ ಕನ್ನಡ ಬ್ಲಾಗ್ ನಿರ್ವಹಣೆಯ ಕಾಯಕದ ಮೂಲಕ ಪೂರ್ಣ ಪ್ರಮಾಣದ ಬರವಣಿಗೆಯಲ್ಲಿ ನಿರತನಾಗಿರುವೆನಾದ್ದರಿಂದ ’ರಂಗನ ದಿನಚರಿ’ಯ ಮರು ಆರಂಭಕ್ಕೆ ಇದು ಸಕಾಲವೆಂದು ತೋರುತ್ತಿದೆ.