Friday 5 April 2013

ಆರ್ಕಿಟೆಕ್ಟ್ ಕೆ ಸತೀಶ್ ನಿಧನ: ಒಂದು ತುಂಬಲಾರದ ನಷ್ಟ


ರ್ಕಿಟೆಕ್ಟ್ ಕೆ. ಸತೀಶ್ ನಿಧನದ ಸುದ್ದಿ ಆಘಾತಕಾರಿ. ಇವರಿಗೆ ಸಾಯುವ ವಯಸ್ಸೇನೂ ಆಗಿರಲಿಲ್ಲ. ಚೀನೀ ವಾಸ್ತುಶಾಸ್ತ್ರ 'ಫೆಂಗ್ ಶುಯಿ’ ಯನ್ನು ಅಳವಡಿಸಿಕೊಂಡು ಇವರು ವಿನ್ಯಾಸಿಸಿದ ಅನೇಕ ಕಟ್ಟಡಗಳು ಹಣದ ಹೊಳೆಯನ್ನೇ ಹರಿಸಿವೆಯೆನ್ನುವ ವಾಸದ ಮನೆ ಸಂಕೀರ್ಣಗಳ ಮಾಲೀಕರಿದ್ದಾರೆ, ವಾಣಿಜ್ಯ ಕೇಂದ್ರಗಳ ಸ್ಥಾಪಕರಿದ್ದಾರೆ. ಭಾರತೀಯ ವಾಸ್ತು ಶಾಸ್ತ್ರಾಧಾರಿತ ಕಟ್ಟಡಗಳಿಗೆ ಒಂದು ಆರೋಗ್ಯಕರವಾದ ಪೈಪೋಟಿ ನೀಡಬಲ್ಲ ಡಿಜ಼ೈನರ್ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದರು.

ಸ್ವಂತ ನಿವೇಶನದಲ್ಲಿ ಮನೆ ಕಟ್ಟಲಿಚ್ಛಿಸುವ ಯಾರಿಗೆ ಬೇಕಾದರೂ, ತಳಪಾಯದಿಂದ ಆರಂಭಿಸಿ ಕಟ್ಟಡ ಪೂರ್ಣಗೊಳ್ಳುವವರೆಗೆ ಅನುಸರಿಸಬೇಕಾದ ಶಿಸ್ತಿನ ಬಗ್ಗೆ ತಿಳುವಳಿಕೆ ನೀಡಲು ಅವರು ತಯಾರಿದ್ದರು. ಅವರು ಅತ್ಯಂತ ಸರಳವಾಗಿ ವಿವರಿಸಿದ್ದನ್ನು ಅಕ್ಷರಶಃ ಅನುಸರಿಸಿ, ಮಾರುಕಟ್ಟೆ ಮೌಲ್ಯಕ್ಕಿಂತ ಶೇ. ೩೦ರಷ್ಟು ಕಡಿಮೆ ವೆಚ್ಚದಲ್ಲಿ ತಂತಮ್ಮ ಗೃಹಗಳನ್ನು ನಿರ್ಮಿಸಿಕಕೊಂಡವರಿದ್ದಾರೆ.

ಅಮಾಯಕರಿಗೆ ಮೋಸ ಮಾಡಿ, ಅವರಿಗೆ ಮನೆ ಕಟ್ಟಿಸಿಕೊಡುವ ನೆಪದಲ್ಲಿ ಕಷ್ಟ ಪಟ್ಟು ದುಡಿದ ಹಣವನ್ನು ಪೋಲು ಮಾಡಿಸುವ ಖದೀಮರು ಗೃಹ ನಿರ್ಮಾಣ ಕ್ಷೇತ್ರದಲ್ಲಿ ತುಂಬಿಹೋಗಿದ್ದಾರೆ. ಆಡು ಭಾಷೆಯಲ್ಲಿ, ಹಂತಹಂತವಾಗಿ, ಸುಲಭವಾಗಿ ಅರ್ಥವಾಗುವಂಥ, ಮನೆ ಕಟ್ಟುವ ವಿಧಾನವನ್ನು ಕುರಿತ ಬರಹಗಳನ್ನು ಪ್ರಕಟಿಸಿ ಆ ಖದೀಮರಿಗೆಲ್ಲ ಸರಿಯಾದ ಪಾಠ ಕಲಿಸಲು ಆರ್ಕಿಟೆಕ್ಟ್ ಕೆ. ಸತೀಶ್ ನಿರ್ಧರಿಸಿದ್ದರು (ಬಲಬದಿಯ ಚಿತ್ರ: ಆರ್ಕಿಟೆಕ್ಟ್ ಸತೀಶ್ ವಿನ್ಯಾಸದ ಒಂದು ಕಟ್ಟಡ).

ತಮ್ಮ ವಿವರಣೆಯನ್ನು ಆಲಿಸಿ, ಸರಳ ಬರಹಗಳನ್ನು ನಿರೂಪಿಸಿ, ಪ್ರಕಟಿಸುವ ಜವಾಬ್ದಾರಿಯನ್ನು ಹೊರಬೇಕೆಂದು ಆರ್ಕಿಟೆಕ್ಟ್ ಕೆ. ಸತೀಶ್ ಈ ಮುನ್ನ ನನ್ನಲ್ಲಿ ವಿನಂತಿಸಿದ್ದರು. ಇದಕ್ಕೆ ೨೦೦೫ರಲ್ಲಿ ಪ್ರಕಟವಾದ ನನ್ನ ಬರಹವೊಂದರ ಲಿಂಕ್ http://articles.economictimes.indiatimes.com/2005-10-24/news/27478628_1_cement-brickbat-terrace  ಅವರಿಗೆ ಪ್ರೇರಣೆ ನೀಡಿತ್ತು. ತಮ್ಮ ಅಪೇಕ್ಷೆಯ ಕೆಲಸ ನನ್ನಿಂದ ಸಾಧ್ಯವೆಂದು ಅವರು ನಂಬಿದಂತಿತ್ತು. ಕಾರಣ, ೨೦೦೫ರಲ್ಲಿ ಪತ್ರಿಕೆಗಳು ನನ್ನಿಂದ ಲೇಖನಗಳನ್ನು ಬರೆಸಿ ಪ್ರಕಟವಾದ ನಂತರ ಸಂಭಾವನೆ ನೀಡುತ್ತಿದ್ದವು. ಆ ದಿನಗಳಲ್ಲಿ ತಾಂತ್ರಿಕ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ವಿಚಾರದಲ್ಲಿ ಪತ್ರಿಕೆಗಳಿಗೆ ವಿಶೇಷವಾದ ಕಳಕಳಿಯಿತ್ತು. ಆ ಪದ್ಧತಿಯಿಂದ ಮುಂದೆ ಸಾಗಿ ಹಲವು ವರ್ಷಗಳ ಸಮಯದ ಹಾದಿ ಈಗಾಗಲೇ ಸವೆದಿದೆ. ಜ್ಞಾನಪ್ರಸಾರದ ಸದುದ್ದೇಶಿತ ಸ್ಥಾನವನ್ನು ವ್ಯಾಪಾರೀ ಮನೋಭಾವವು ಆಕ್ರಮಿಸಿಕೊಂಡಿದೆ. 

ಅವರ ಅನನ್ಯವಾದ ವಿವರಣೆಗಳನ್ನು ಆಲಿಸಿ, ಈ ಬ್ಲಾಗ್ ಮುಖಾಂತರ ಅಂಚೆಗಳನ್ನು ನಿರೂಪಿಸಲು ನಾನು ಆರ೦ಭಿಸುವ ಮುನ್ನವೇ ಅವರಿಲ್ಲವಾದರು (ಆರ್ಕಿಟೆಕ್ಟ್ ಕೆ. ಸತೀಶ್ ಅವರ ಕ್ಯಾಬಿನ್). ಹೊರ ಊರಿನ ಮದುವೆ ಸಮಾರಂಭವೊಂದರಲ್ಲಿ  ಭಾಗವಹಿಸಿ ಬೆಂಗಳೂರಿಗೆ ಹಿಂದಿರುಗುವಾಗ ಅವರು ಅಪಘಾತಕ್ಕೀಡಾದರು. ಮೂಳೆ ಮುರಿದಿದ್ದರಿಂದ ಪ್ಲಾಸ್ಟರ್ ಹಾಕಿಸಿಕೊಂಡು ಮನೆಗೆ ಹಿಂದಿರುಗಿದ್ದರು. ಆದರೂ ಅಪಘಾತಾನಂತರದ ಪರಿಣಾಮ ಬದುಕಗೊಡದೆ ಅವರನ್ನು ನುಂಗಿಕೊ೦ಡಿತು.

Thursday 4 April 2013

ಪೀಠಿಕೆ

ಎ  ವರ್ಷಗಳ ಮುನ್ನ ದಿ. ಎಂ ಮಲ್ಲಿಕಾರ್ಜುನಯ್ಯನವರ (ಡಬ್ಬಲ್ಲೆಂ) ನೇತೃತ್ವದಲ್ಲಿ ದಿನಪತ್ರಿಕೆ 'ಕರ್ನಾಟಕ ಮಲ್ಲ’ ಮುಂಬಯಿ ಕನ್ನಡಿಗರ ನಡುವೆ ಜನಜನಿತವಾಗಿತ್ತು.  ಷ್ಟೋ


ಆಗ್ಗೆ ಸಂಸ್ಥೆ Bombay Architectural Consultants ಅಧೀನದಲ್ಲಿ ಮು೦ಬಯಿಯ ಸುತ್ತಮುತ್ತ ನಿರ್ಮಾಣವಾಗುತ್ತಿದ್ದ ಕಟ್ಟಡಗಳ ಮೇಲುಸ್ತುವಾರಿಗೆ ನಾನು ನೇಮಿಸಲ್ಪಟ್ಟಿದ್ದೆ. ವೃತ್ತಿಶಃ ಸಿವಿಲ್ ಇಂಜಿನಿಯರ್ ಆಗಿದ್ದ ನಾನು ಬರವಣಿಗೆ ಗೀಳಿನ ಮನುಷ್ಯನೆಂಬುದನ್ನು ಅರಿತಿದ್ದ ಡಬ್ಬಲ್ಲೆಂ, 'ನಿನ್ನ ವೃತ್ತಿಯ ವಿಷಯವೇ ಆಗಿದ್ದರೂ ಸರಿ, ನಮ್ಮ ಪತ್ರಿಕೆಗೆ ಏನಾದರೂ ರೆಗ್ಯುಲರ್ ಆಗಿ ಬರಿ’ ಎಂದು ಆದೇಶಿಸಿದರು. 'ಕರ್ನಾಟಕ ಮಲ್ಲ’ದಲ್ಲಿ ನನ್ನ ಕೆಲವು ವಾರದ ಕತೆಗಳು ಪ್ರಕಟವಾದ ನಂತರ ದೊರೆತ ಪ್ರತಿಕ್ರಿಯೆ ಅದಾಗಿತ್ತು.

ಅಂಥದೇ ಪ್ರತಿಕ್ರಿಯೆ ಆ ದಿನಗಳಲ್ಲಿ 'ಉದಯವಾಣಿ’ ಮ್ಯಾಗಜಿನ್ ವಿಭಾಗದ ಸಂಪಾದಕರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರಿಂದಲೂ ವ್ಯಕ್ತವಾಗಿತ್ತು. 'ಉದಯವಾಣಿ’ಯಲ್ಲಿ ಪ್ರಕಟವಾದ ನನ್ನ ಸಣ್ಣ ಕತೆಗಳಿಗೆ ಸಂಭಾವನೆ, ಈಗ ಬಹಳ ದೊಡ್ಡ ಮನುಷ್ಯರಾಗಿರುವ ಈಶ್ವರ ದೈತೋಟರ ಕವರಿಂಗ್ ಲೆಟರ್ ಸಮೇತ ನನಗೆ ಪ್ರಾಪ್ತವಾಗುತ್ತಿತ್ತು.


ಡಬ್ಬಲ್ಲೆಂ ಮತ್ತು ಬನ್ನಂಜೆಯಂಥ ಧೀಮಂತರ 'ಏನಾದರೂ ರೆಗ್ಯುಲರ್ ಆಗಿ ಬರಿ’ ಎಂಬ ಆದೇಶ, ನನ್ನ ಮನದೊಳಗನ್ನು ಮರಕುಟುಕನ ಥರ ಪದೇಪದೇ ಚುಚ್ಚಿದ ಅನುಭವವಾಯಿತು. ಒಂದು ದಿನ ಸಂಜೆ, ಅಂದಿನ ಸಂದರ್ಭಕ್ಕೆ ಅನ್ವಯಿಸುತ್ತಿದ್ದ ೫೦೦ ಪದಗಳಿದ್ದ  ಒಂದು ಲೇಖನದೊಂದಿಗೆ, ಮುಂಬಯಿ ಕೋಟೆ ಪ್ರದೇಶದಲ್ಲಿ ಫ಼್ಲೋರಾ ಫೌಂಟನ್ ಸಮೀಪದಲ್ಲಿದ್ದ 'ಕರ್ನಾಟಕ ಮಲ್ಲ’ ಕಛೇರಿಯಲ್ಲಿ ಹಾಜರಾದೆ. ನಿಗದಿತ ಸಮಯವಾದ್ದರಿಂದ ಡಬ್ಬಲ್ಲೆಂ ನನಗೋಸ್ಕರ ಕಾಯುತ್ತಿದ್ದರು.

ಆ ಲೇಖನದೊಂದಿಗೆ ನನ್ನ ಅಂಕಣ 'ರಂಗನ ದಿನಚರಿ’ ಮೊದಲಿಟ್ಟಿತು. ಮುಂಬಯಿ ಟೆನ್ಯೂರ್ ಮುಕ್ತಾಯಗೊಳಿಸಿ ನಾನು ಬೆಂಗಳೂರಿಗೆ ಹಿಂದಿರುಗಿದ ನಂತರ 'ನಿನ್ನ ಅಂಕಣ ಭಾರೀ ಸದ್ದು ಮಾಡುತ್ತಿದೆ’ ಎಂದು ಆಗಾಗ್ಗೆ ಡಬ್ಬಲ್ಲೆಂ ಹೇಳುತ್ತಿದ್ದುದುಂಟು. ಆದೇ ವಿಶ್ವಾಸದಿಂದ, ಅವರುಬೆಂಗಳೂರಿನಲ್ಲಿ ಆಂಗ್ಲ ಮಾಧ್ಯಾಹ್ನಿಕ 'ಸಿಟಿ ಟುಡೇ' ಆರಂಭಿಸಿದಾಗ ನನಗೆ ಸಲಹೆಗಾರನ ಕಾರ್ಯಭಾರವನ್ನು ವಹಿಸಿದ್ದರು.

'ರಂಗನ ದಿನಚರಿ’ಯನ್ನು ಬೀದರ್ ಮೂಲದ, ಶಕುಂತಲಾ ಟ್ರಾವಲ್ಸ್ ಮಾಲೀಕತ್ವದ  'ಉತ್ತರ ಕರ್ನಾಟಕ’ ದಿನಪತ್ರಿಕೆಯ ಬೆಂಗಳೂರು ಆವೃತ್ತಿ ಚಾಲನೆಯಲ್ಲಿದ್ದಾಗ ಪುನರಾರಂಭಿಸಿದ್ದೆ. ಆ ಆವೃತ್ತಿ ಸ್ಥಗಿತಗೊಂಡಾಗ, ನನ್ನ ಸಿವಿಲ್ ಇಂಜಿನಿಯರಿಂಗ್ ಚಟುವಟಿಕೆ ಹೆಚ್ಚಾಗಿದ್ದ ನಿಮಿತ್ತ ಬೇರೆ ಪತ್ರಿಕೆಯ ಕಡೆಗೆ ಸಾಗದೆ, ಸ್ವಲ್ಪ ಸಮಯ ನನ್ನ ಅಂಕಣ ನೇಪಥ್ಯದಲ್ಲಿರಲೆಂದು ತೀರ್ಮಾನಿಸಿ ಸುಮ್ಮನಿದ್ದೆ.


ಇತ್ತೀಚೆಗೆ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ’ಗುಡ್ ಬೈ’ ಹೇಳಿ, ಪೂಜ್ಯ ಗುರೂಜಿ ಶ್ರೀ ಶ್ರೀ ರವಿಶಂಕರ್ ಅವರ ಕನ್ನಡ ಬ್ಲಾಗ್ ನಿರ್ವಹಣೆಯ ಕಾಯಕದ ಮೂಲಕ ಪೂರ್ಣ ಪ್ರಮಾಣದ ಬರವಣಿಗೆಯಲ್ಲಿ ನಿರತನಾಗಿರುವೆನಾದ್ದರಿಂದ ’ರಂಗನ ದಿನಚರಿ’ಯ ಮರು ಆರಂಭಕ್ಕೆ ಇದು ಸಕಾಲವೆಂದು ತೋರುತ್ತಿದೆ.