ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/
Thursday 29 February 2024
ಬದುಕಿನ ಹಾದಿ - 7
Tuesday 27 February 2024
ಬದುಕಿನ ಹಾದಿ - 6
ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/
Sunday 25 February 2024
ಬದುಕಿನ ಹಾದಿ - 5
ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/
Friday 23 February 2024
ಬದುಕಿನ ಹಾದಿ - 4
ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/
ಮೇಲ್ಕಂಡ ಉಕ್ತಿಯ ಭಾವಾರ್ಥ: ಯಾರನ್ನೂ ನಿಷ್ಪ್ರಯೋಜಕ ಎಂದು ಪರಿಗಣಿಸಬೇಡಿ. ಏಕೆಂದರೆ ಫಲ ನೀಡದ ಮರವೂ ಸಹ ನಮಗೆ ನೆರಳನ್ನು ನೀಡುವುದು ನಿಶ್ಚಿತ.
ಕಡೆಗಣಿಕೆ, ಅರ್ಥಾತ್ ತಾತ್ಸಾರದಿಂದ ಕಾಣುವ ಮುಖೇನ ಯಾವುದೇ ಸತ್ಪರಿಣಾಮವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮತ್ತೆಯೋರ್ವರು ತೀವ್ರವಾಗಿ ಕಡೆಗಣಿಸಲ್ಪಟ್ಟು ಚಿಕ್ಕ ವಯಸ್ಸಿನಲ್ಲೇ ಅಸು ನೀಗಿದರು. ತಾತ್ಸಾರಕ್ಕೆ ಗುರಿಯಾದ ನಮ್ಮಪ್ಪ ಮತ್ತು ಚಿಕ್ಕಪ್ಪ ವಿದ್ಯಾರ್ಥಿಗಳಾಗಿರಬೇಕಾದ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ ಸಮಸ್ತ ಭಾರತದ ಬೀದಿಬೀದಿಗಳನ್ನು ಸುತ್ತುತ್ತ ಕಂಡಕಂಡ ಕಸುಬುಗಳನ್ನೆಸಗುತ್ತಾ ಕಾಲ ಕಳೆದರು.
ನಮ್ಮ ಕುಟುಂಬದಲ್ಲಿ ನಮ್ಮಪ್ಪ ಮತ್ತು ಚಿಕ್ಕಪ್ಪನ ನಡುವೆ ಇಂದಿರಾ ಮತ್ತು ಲೀಲಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದರಂತೆ. ಮದುವೆಯ ಮುನ್ನ ಅಡುಗೆ ಮತ್ತು ಮನೆ ಕೆಲಸವನ್ನು ಅವರಿಬ್ಬರೂ ಹಂಚಿಕೊಂಡು ಮಾಡುತ್ತಿದ್ದ ನಿಮಿತ್ತ, ಇಡೀ ಮನೆ ಒಂದಿಷ್ಟೂ ಧೂಳಿರದೆ ಕಣ್ಣುಗಳಿಗೆ ಹಬ್ಬವುಂಟುಮಾಡುವುದರ ಜೊತೆಗೆ ಮನೆಯವರೆಲ್ಲರಿಗೂ ಪ್ರತಿದಿನ ಸ್ವಾದಿಷ್ಟವಾದ ಮೃಷ್ಟಾನ್ನವನ್ನು ಸವಿಯುವ ಅವಕಾಶ ಪ್ರಾಪ್ತವಾಗುತ್ತಿತ್ತು.
ಆ ಬಾಲೆಯರ ಪೈಕಿ ಇಂದಿರಾ ಮದುವೆಯಾಗಿ, ಕಾವ್ಯವಾಚನಕ್ಕೆ ಹೆಸರುವಾಸಿಯಾಗಿದ್ದ ಕುಟುಂಬವೊಂದರ ಸೊಸೆಯಾಗಿ ತೆರಳಿದಳು. ಸಮಯ ಕಳೆದಂತೆ ಕಾರ್ಯತತ್ಪರ ಇಂದಿರಾಗೆ ಪತಿಗೃಹದಲ್ಲಿ ಎಡೆಬಿಡದೆ ಸಾಗುತ್ತಿದ್ದ ಗಮಕಾಭ್ಯಾಸದ ತರಂಗಗಳು ಚಿಟ್ಟು ಹಿಡಿಸತೊಡಗಿದವು. ಒಂದು ದಿನ ಮಧ್ಯಾಹ್ನ ಯಾರೂ ಮನೆಯಲ್ಲಿ ಇಲ್ಲದಿದ್ದಾಗ, ಗಮಕ ಕುರಿತು ಅವಳ ಮನದಲ್ಲೆದ್ದ ಕ್ರೋಧವು ಅಲ್ಲಿದ್ದ ಒಂದಷ್ಟು ಅಭ್ಯಾಸ ಪುಸ್ತಕಗಳ ಕಡೆಗೆ ಹರಿಹಾಯ್ದಿತು. ಇಂದಿರಾ ಅವುಗಳನ್ನೆತ್ತಿ ತಂದು ಮನೆಯ ಮುಂದೆ ಮೋರಿಯಲ್ಲಿ ರಭಸದಿಂದ ಹರಿಯುತ್ತಿದ್ದ ನೀರಿನೊಳಕ್ಕೆ ಸುರಿದಳು. ಕ್ಷಣಾರ್ಧದೊಳಗೆ ಆ ಪುಸ್ತಕಗಳು ಪ್ರವಾಹದಲ್ಲಿ ಮಾಯವಾದವು.
ನಂತರ ಮನೆಯವರು ವಿಚಾರಿಸಿದಾಗ ಎಲ್ಲವನ್ನೂ ಇದ್ದುದಿದ್ದಂತೆ ವಿವರಿಸಿದ ಇಂದಿರಾ, ಆವೇಶದ ಭರದಲ್ಲಿ ಹಾಗೆ ಮಾಡಿದೆನೆಂದಳು. ಆಗ ಮನೆಯವರಲ್ಲಿ ಸೊಸೆಯ ಮೇಲಿನ ಮಮಕಾರ ಮಾಯವಾಗಿ ಆ ಸ್ಥಾನವನ್ನು ತಾತ್ಸಾರ ಅವರಿಸಿತು. 'ಗಮಕ ನಿನಗೆ ಬೇಡವೆಂದರೆ ನೀನೂ ನಮಗೆ ಬೇಡ' ಎನ್ನುತ್ತಾ ಅವಳ ಗಂಡ ಮೊದಲುಗೊಂಡು ಮನೆಯವರೆಲ್ಲರೂ ಅವಳನ್ನು ಮನೆಯಿಂದಾಚೆಗೆ ದಬ್ಬಿದರು! ಅಜರಾಮರವೆಂದು ಹೊಗಳಿಸಿಕೊಳ್ಳುವ ಗಂಡ - ಹೆಂಡಿರ ಪ್ರೇಮ ಅಷ್ಟೊಂದು ಕ್ಷುಲ್ಲಕ ರೀತಿಯಲ್ಲಿ ಆ ಕುಟುಂಬದಲ್ಲಿ, ಭಾರತಕ್ಕೆ ಸ್ವತಂತ್ರ ಲಭಿಸಿದ ಹೊಚ್ಚಹೊಸತರಲ್ಲಿಯೇ ನುಚ್ಚುನೂರಾಗಿದ್ದು ಅನಿರೀಕ್ಷಿತ.
ರಸ್ತೆಗೆ ಬಂದು ಬಿದ್ದ ಇಂದಿರಾಳ ಮೇಲೆ ಅಪ್ಪಳಿಸಿದವು, ಮನೆಯಿಂದ ತೂರಲ್ಪಟ್ಟ ಅವಳ ಬಟ್ಟೆಬರೆಗಳು! ದಿಕ್ಕು ತೋಚದೆ ಅವಳು ಗಂಟೆಗಟ್ಟಲೆ ಅಲ್ಲಿಂದ ಕದಲಲಿಲ್ಲ, ಆದರೂ ಆ ನಿರ್ದಯಿ ಮನೆಯ ಬಾಗಿಲು ತೆರೆಯಲಿಲ್ಲ, ಆ ಮನೆಯೊಳಕ್ಕೆ ಮತ್ತೊಮ್ಮೆ ಕಾಲಿಡಲು ಅವಳಿಗೆ ಸಾಧ್ಯವಾಗಲಿಲ್ಲ. ಅಂದಿನ ನೀರೆಯರಿಗೆ, ಇಂದು ಹೆಣ್ಣುಮಕ್ಕಳಿಗೆ ಸ್ವತಂತ್ರವಾಗಿ ನೆಲೆಯೂರಲು ಲಭಿಸುತ್ತಿರುವಂಥ ಅವಕಾಶಗಳನ್ನು ಕನಸಿನಲ್ಲಿಯೂ ನೆನೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಕಣ್ಣೀರು ಹಾಕುತ್ತ ತವರಿಗೆ ಹಿಂದಿರುಗಿದ ಇಂದಿರಾಳ ಸಮ್ಮುಖದಲ್ಲಿ ಅವಳ ಅಪ್ಪನ ರೂಪದಲ್ಲಿದ್ದ ಬ್ರಹ್ಮರಾಕ್ಷಸ (ನಮ್ಮಜ್ಜ - ಅಪ್ಪನ ಅಪ್ಪ) ಪ್ರತ್ಯಕ್ಷನಾದ! ದುಃಖಾತಿರೇಕರೇಕದೊಂದಿಗೆ ಸ್ವಪುತ್ರಿಯಾದ ಇಂದಿರಾ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಆ ಪಾಪಿ ಕಿಂಚಿತ್ತಾದರೂ ಮರುಕವಿಲ್ಲದೆ, 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗು. ಆದ್ದರಿಂದ ನೀನು ಇಲ್ಲಿಂದ ತೊಲಗು' ಎಂದು ಅಬ್ಬರಿಸಿದ. ಆ ಅಯೋಗ್ಯನ ವರ್ತನೆ ಸಹ್ಯವಾಗದೆ, ಮಗಳ ಕಷ್ಟವನ್ನು ಕಣ್ತುಂಬಿಕೊಳ್ಳಲಾರದೆ ನಮ್ಮಜ್ಜಿ ಮಧ್ಯೆ ಪ್ರವೇಶಿಸಿದರು. ಅವರನ್ನೂ ಒದ್ದು ಮೂಲೆಗೆ ತಳ್ಳಿದ ನಮ್ಮಜ್ಜ. ದಬ್ಬಾಳಿಕೆ ಆ ದಿನಗಳಲ್ಲಿ ಅದಿನ್ನೆಷ್ಟು ಪ್ರಚಂಡವಾಗಿತ್ತು ಎಂಬುದನ್ನು ಊಹಿಸಿಕೊಳ್ಳಿ!
ನಮ್ಮಜ್ಜ ಯಾರ ಮಾತಿಗೂ ಜಗ್ಗದೆ, ಇಂದಿರಾಳನ್ನು ದೂರೀಕರಿಸಿಯೇ ಸಿದ್ದವೆಂಬ ವಿಕೃತ ಸಂಕಲ್ಪದಲ್ಲಿದ್ದ. ಆದರೆ ನಮ್ಮಜ್ಜಿಯ ಮನಸ್ಸು ತಡೆಯಲಿಲ್ಲ. ಸಮೀಪದಲ್ಲಿಯೇ ಒಂದು ಕೋಣೆಯನ್ನು ಬಾಡಿಗೆಗೆ ಗೊತ್ತುಮಾಡಿ ಮಗಳನ್ನು ಅದರಲ್ಲಿರಿಸಿದರು. ಉಪಹಾರ ಮತ್ತು ಊಟವನ್ನು ಅಜ್ಜನ ಕಣ್ಣು ತಪ್ಪಿಸಿ ತಂದು ಅವಳಿಗೆ ಊಡಿಸಿ, ಅವಳು ಬದುಕಿನ ಮೇಲೆ ಮತ್ತೆ ವಿಶ್ವಾಸ ಹೊಂದುವಂತೆ ಮಾಡಲು ಶತಪ್ರಯತ್ನ ನಡೆಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಇನ್ನಿಲ್ಲದಂತೆ ನಲುಗಿಹೋಗಿದ್ದ ಇಂದಿರಾ ಸಂಪೂರ್ಣವಾಗಿ ಅನ್ನ ನೀರು ತ್ಯಜಿಸಿದ್ದರಿಂದ, ಪ್ರಪಂಚವನ್ನೇ ಸರಿಯಾಗಿ ನೋಡಿರದ ತನ್ನ 20 - 21ರ ವಯೋಮಾನದಲ್ಲಿ, ಕೆಲವೇ ದಿನಗಳೊಳಗೆ ಇನ್ನಿಲ್ಲವಾದಳು.
Wednesday 21 February 2024
ಬದುಕಿನ ಹಾದಿ - 3
ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/
ಮೇಲ್ಕಂಡ ಉಕ್ತಿಯ ಭಾವಾರ್ಥ: ಜೀವನ ಕೆಟ್ಟದಾಗಿದೆ ಎಂದು ಎಂದಿಗೂ ಹೇಳಬೇಡಿ. ನಾವು ಮುಳ್ಳುಗಳಿಂದ ಸುತ್ತುವರಿದ ಗುಲಾಬಿಗಳು ಎಂದು ಅರ್ಥಮಾಡಿಕೊಳ್ಳಿ.
ನಮ್ಮಮ್ಮನದ್ದು ಕೇವಲ ಎಂಟು ವರ್ಷಗಳ ಅವಧಿಯ ವೈವಾಹಿಕ ಬದುಕು. ಅಷ್ಟು ಕಡಿಮೆ ಅವಧಿಯಲ್ಲಿಯೇ ಅವರಿಗೆ ಎದುರಾದ ವಿಸ್ಮಯಗಳು ಹಲವು. ಆ ದಿನಗಳಲ್ಲಿ ಮೊಟ್ಟಮೊದಲನೆಯದಾಗಿ ಪತ್ನಿಯು ತನ್ನ ಅಡುಗೆ ಕೈಚಳಕದ ಮೂಲಕ ಪತಿಯನ್ನು ಆಕರ್ಷಿಸುವಳೆಂದು ನಿರೀಕ್ಷಿಸಲಾಗುತ್ತಿತ್ತು. ವಿವಾಹ ಪೂರ್ವದಲ್ಲಿ ಅಡುಗೆ ಕುಶಲತೆ ಪ್ರದರ್ಶಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮನಸ್ಸನ್ನೂ ಸೂರೆಗೊಳ್ಳುತ್ತಿದ್ದ ನಮ್ಮಮ್ಮನಿಗೆ, ಖಾರದ ಅಡುಗೆ ವಿಷಯದಲ್ಲಿ ನಮ್ಮಪ್ಪನನ್ನು ತೃಪ್ತಿ ಪಡಿಸಲು ಸಾಧ್ಯವೇ ಆಗಲಿಲ್ಲವಂತೆ. ತುತ್ತಿಗೆ ಒಂದರಂತೆ ಜಗಿಯುತ್ತ, ಒಂದು ಹೊತ್ತಿನ ಊಟ ಪೂರೈಸುವುದರೊಳಗೆ ಬೆರಳುದ್ದದ ಕಾಲು ಕಿಲೋ ಹಸಿಮೆಣಸಿನಕಾಯಿಯನ್ನು ನಮ್ಮಪ್ಪ ಖಾಲಿ ಮಾಡುತ್ತಿದ್ದರಂತೆ!
ಮೂವಿಲ್ಯಾಂಡ್ ಥಿಯೇಟರಿನ ಬಲಭಾಗದ ರಸ್ತೆಯಲ್ಲಿರುವ ಅಂಗಡಿ ಸಾಲಿನಲ್ಲಿ ಒಂದು ನಮ್ಮಪ್ಪನ ಟೈಲರಿಂಗ್ ಷಾಪ್ ಆಗಿತ್ತಂತೆ. ಅಲ್ಲಿಂದ ಒಂದು ಫರ್ಲಾಂಗ್ ದೂರದಲ್ಲಿ, ಅದೇ ಮೂವಿಲ್ಯಾಂಡ್ ಮುಖ್ಯರಸ್ತೆಯ ಹಿಂಬದಿಗಿದ್ದ ಕಿರುರಸ್ತೆಯಲ್ಲಿ ನಮ್ಮಪ್ಪ ವಾಸಕ್ಕೆ ಮನೆ ಮಾಡಿದ್ದರಂತೆ. ವೈವಾಹಿಕ ಜೀವನದ ಆರಂಭದಲ್ಲಿ ನಮ್ಮಮ್ಮನ ಜೊತೆಯಲ್ಲಿ ನಮ್ಮಜ್ಜಿ (ನಮ್ಮ ಅಪ್ಪನ ಅಮ್ಮ) ಸಹ ಇದ್ದರಂತೆ. ಒಂದು ದಿನ ನಮ್ಮಪ್ಪ ಒಬ್ಬ ಮುದುಕನನ್ನು ಮನೆಗೆ ಕರೆತಂದು, "ಇವರಿಗೆ ದಿನಾ ಬೆಳಿಗ್ಗೆ ಚೆನ್ನಾಗಿ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಉಪಹಾರ ಕೊಟ್ಟು ಅಂಗಡಿಗೆ ಕಳಿಸು" ಎಂದು ನಮ್ಮಮ್ಮನಿಗೆ ಹೇಳಿದರಂತೆ. ಅಲ್ಲಿಯೇ ಇದ್ದ ನಮ್ಮಜ್ಜಿ, "ಹೆಂಡತಿಗೆ ಇಂಥ ಕೆಲಸ ಹೇಳುತ್ತಿದ್ದಿಯಲ್ಲ, ನಿನಗೆ ನಾಚಿಕೆ ಆಗುವುದಿಲ್ಲವೇ?" ಎಂದು ಚೆನ್ನಾಗಿ ಬೈದರಂತೆ. ಮರುಮಾತಾಡದೆ ಆನಂತರ ನಮ್ಮಪ್ಪ, ತನ್ನ ಅಂಗಡಿಯ ಆ ಹೊಸ ಮುದಿ ದರ್ಜಿಯನ್ನು ವಾಪಸ್ ಕರೆದುಕೊಂಡು ಹೋದರಂತೆ. ಆತ ಮತ್ತಿನ್ನೆಂದೂ ಮನೆಯ ಕಡೆ ಸುಳಿಯಲಿಲ್ಲ.
ಇನ್ನೊಮ್ಮೆ ನಮ್ಮಪ್ಪ, ನವದಂಪತಿಗಳಾದ ಓರ್ವ ಯುವಕ ಮತ್ತು ಓರ್ವ ಯುವತಿಯನ್ನು ಮನೆಗೆ ಕರೆತಂದು, "ಸ್ವಲ್ಪ ಕಾಲ ನಮ್ಮ ಮನೆಯಲ್ಲಿಯೇ ಇರುವ ಇವರಿಬ್ಬರಿಗೂ ಹೊತ್ತುಹೊತ್ತಿಗೆ ಸ್ನಾನ, ಆಹಾರ, ನಿದ್ದೆಗೆ ವ್ಯವಸ್ಥೆ ಮಾಡುವುದು ನಿನ್ನ ಕೆಲಸ" ಎಂದು ನಮ್ಮಮ್ಮನಿಗೆ ಹೇಳಿದಾಗ ನಮ್ಮಜ್ಜಿ ಅಲ್ಲಿರಲಿಲ್ಲ. ಪ್ರಾಯಶಃ ಅಂಗಡಿಯಲ್ಲಿ ಕಸ ಗುಡಿಸಿ ಒರೆಸಲು ನಿಯುಕ್ತರಾಗಿದ್ದ ಆ ಗಂಡ - ಹೆಂಡತಿ ಉಪಚಾರವನ್ನು ತಿಂಗಳುಗಟ್ಟಲೆ ನಮ್ಮಮ್ಮ ಚಾಚೂ ತಪ್ಪದೆ ನಿರ್ವಹಿಸಿದರು.
ಇನ್ನೊಂದು ಸಲ ನಮ್ಮಪ್ಪ ಅಂಗಡಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದ ಓರ್ವ ದರ್ಜಿಯನ್ನು ಮನೆಗೆ ಕರೆತಂದು, "ಪ್ರತಿದಿನ ಮಧ್ಯಾಹ್ನ ಇವನಿಗೆ ಅಡುಗೆ ಮಾಡಿ ಹಾಕಿ, ಇವನ ಕೈಲೇ ನನ್ನ ಮಧ್ಯಾಹ್ನದ ಊಟವನ್ನು ಡಬ್ಬಿಗೆ ಹಾಕಿ ಕಳಿಸು" ಎಂಬ ಆದೇಶ ನೀಡಿದಾಗಲೂ ನಮ್ಮಜ್ಜಿ ಮನೆಯಲ್ಲಿ ಇರಲಿಲ್ಲ. ಊಟ ಮಾಡುವಾಗ ಪದೇಪದೇ ಹೋಳು ಹಾಕಿಸಿಕೊಂಡು, ಮನೆಯಲ್ಲಿ ಉಳಿದವರಿಗೆ ಹೋಳಿಲ್ಲದ ಸಾರೇ ಗತಿ ಎಂಬ ಪರಿಸ್ಥಿತಿ ಉಂಟುಮಾಡುತ್ತಿದ್ದ ಆತನಿಗೂ ಲೋಪವಿಲ್ಲದಂತೆ ನಮ್ಮಮ್ಮ ಉಪಚಾರ ಮಾಡಿದರು.
ನಮ್ಮಮ್ಮನಿಗೆ ಗಣನೆಗೆ ಸಿಗದಷ್ಟು ಸಂಖ್ಯೆಯಲ್ಲಿ ವೈವಾಹಿಕ ಜೀವನದುದ್ದಕ್ಕೂ ಇಂಥ ಸನ್ನಿವೇಶಗಳು ಎದುರಾಗುತ್ತಲೇ ಇದ್ದವು.
Tuesday 20 February 2024
ಬದುಕಿನ ಹಾದಿ - 2
Sunday 18 February 2024
ಬದುಕಿನ ಹಾದಿ - 1
(ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು)
ಲಿಂಕ್ https://virendrakumarkochar.blogspot.com/ ಮುಖೇನ ತೆರೆದುಕೊಳ್ಳುವ ಅಂತರ್ಜಾಲ ಅಂಚೆಗಳ ಸರಣಿಯು ಉಲ್ಲೇಖಿಸುತ್ತಿರುವ ಶುಭಾಶಯಗಳು ಜೀವನದ ಅರ್ಥವನ್ನು ಹೆಚ್ಚಿಸಲು ಪ್ರೇರಕವಾಗಿವೆ. ಇದನ್ನು ಕುರಿತು ನನ್ನ ಸಂಪರ್ಕದಲ್ಲಿರುವ ಬಂಧುಮಿತ್ರರಿಗೆ ನಾನಿಂತು ಅದೇಶಿಸಿದೆ:
ನಮ್ಮ ಹೆಸರಿನೊಂದಿಗೆ ನಿಯಮಿತವಾಗಿ ಅಂತಹ ಶುಭಾಶಯಗಳನ್ನು ಸಂಯೋಜಿಸುವ ಮತ್ತು ನಮ್ಮನ್ನು ವಿಶೇಷ ವ್ಯಕ್ತಿಗಳನ್ನಾಗಿ ಚಿತ್ರಿಸುವ ಕುಟುಂಬ್ ಅಪ್ಲಿಕೇಶನ್ಗೆ ಅಂತ್ಯವಿಲ್ಲದ ನಮನ.
ಮಹತ್ವಾಕಾಂಕ್ಷಿ ಬರಹಗಾರರು ಈ ಶುಭಾಶಯಗಳನ್ನು ತಮ್ಮ ಜೀವನದ ನಾನಾ ಪ್ರಸಂಗಗಳಿಗೆ ಅನ್ವಯಿಸಿ, ತಮಗೆ ಅನುಕೂಲವಾದ ಭಾಷೆಯಲ್ಲಿ ಬರೆಯುವ ಮೂಲಕ ತಮ್ಮ ಜೀವನಚರಿತ್ರೆಯನ್ನು ರಚಿಸಬಹುದು, ಹಾಗೂ ರತ್ನಾಕರ್ ಅವರಂಥ ಪ್ರಕಾಶಕರ ಉಚಿತ ಬೆಂಬಲದ ಮೂಲಕ (ಮೊಬೈಲ್ # 8884540400) ಪ್ರಸಿದ್ಧರಾಗಬಹುದು.
ಅಂಥ ಜೀವನಚರಿತ್ರೆಗಳನ್ನು ಆರಂಭದಲ್ಲಿ ಅನೇಕ ಅಧ್ಯಾಯಗಳ ರೂಪದಲ್ಲಿ ಪ್ರಕಟಿಸಲು ಕೆಲವು ಬ್ಲಾಗರ್ ಖಾತೆಗಳ ರಚನೆಗೆ ನಾನೂ ತೊಡಗಿಕೊಳ್ಳುವ ಮೂಲಕ ಕುಟುಂಬ್ ಅಪ್ಲಿಕೇಶನ್ಗೆ ಹೆಚ್ಚಿನ ಪ್ರಚಾರ ಒದಗಿಸಲು ಯತ್ನಿಸಬಹುದು.
ಮೇಲಿನಂತೆ ಹತ್ತು ಹಲವರಿಗೆ ರವಾನಿಸಿದ ಆದೇಶಕ್ಕೆ ಅನುಗುಣವಾಗಿ, ಸ್ವತಃ ಕೆಲಸ ಮಾಡಿ ನಿದರ್ಶನ ಒದಗಿಸಬೇಕಾದ್ದು ಅತ್ಯಗತ್ಯ. ಆ ಮೇರೆಗೆ ಮುಂದಡಿಯಿಡುತ್ತ ಒಂದು ಗ್ರಂಥದ ರಚನೆಯನ್ನು ಇದೋ ಆರಂಭಿಸುತ್ತಿದ್ದೇನೆ.
ಮೇಲ್ಕಂಡ ಉಕ್ತಿಯ ಅರ್ಥ: ನಾನು ಕಲ್ಲು, ನನ್ನ ತಂದೆ-ತಾಯಿಗಳು ನನ್ನ ಕುಶಲಕರ್ಮಿಗಳು, ಆದ್ದರಿಂದ ಅವರು ನನ್ನ ಎಲ್ಲಾ ಪ್ರಶಂಸೆಗೆ ಅರ್ಹರು. ಈ ಘೋಷವಾಕ್ಯ, ನಾವು ಎಸಗುವ ಹಿರಿಯರ ಸೇವೆಯಲ್ಲಿ ಲೋಪವಿರಬಾರದು ಎಂದು ಸೂಚಿಸುತ್ತದೆ.
ಮೂರ್ತಿಪೂಜೆ ಅರ್ಥಹೀನವೆಂದು ವಾದಿಸುವವರಿಗೆ ನಮ್ಮಮ್ಮ ನೀಡುವ ಸಮಾಧಾನವನ್ನು ಗಮನಿಸಿ: ಸಕಲ ಸೌಲಭ್ಯಗಳಿಗೆ ಕಾರಣವಾದ, ಅರ್ಹರಲ್ಲದಿದ್ದರೂ ಸಮಸ್ತವನ್ನೂ ನಿರ್ವಂಚನೆಯಿಂದ ನಮಗೆ ಒದಗಿಸಿ, ಸುಖದುಃಖಗಳ ಸರಮಾಲೆ ಧರಿಸಿ ಮುನ್ನುಗ್ಗಲು ಅನುವು ಮಾಡಿಕೊಡುವ ಪ್ರಕೃತಿಗೆ ಒಂದು ಸಾಮಾನ್ಯವಾದ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯವಲ್ಲವೇ? ಆಲೋಚನೆಯ ಸಾಮರ್ಥ್ಯ ಇಲ್ಲದ ನಾಯಿಗೆ ಒಂದು ಹಿಡಿ ಅನ್ನ ಹಾಕಿದರೂ ಅದು ಬದುಕಿನುದ್ದಕ್ಕೂ ನಮಗೆ ಕೃತಜ್ಞತೆ ಸಲ್ಲಿಸುವುದು ಕಾಣದೆ? ಬುದ್ಧಿಜೀವಿಗಳಾದ ನಾವಿನ್ನೆಷ್ಟು ಕೃತಜ್ಞರಾಗಿರಬೇಡ? ಕೆಳಕಂಡ ವಿಡಿಯೋ ಗಮನಾರ್ಹ!
https://youtu.be/J0ocUXjlB1w?si=M1dNSpYkX7Zf6y1j
ರಸ್ತೆ ಬದಿ, ಜಲಪಾತದ ತುದಿ ಮುಂತಾಗಿ ಎಲ್ಲಿದ್ದರೆ ಅಲ್ಲಿಂದಲೇ ಅಗಾಧವಾದ, ಅಸದೃಶ ಬೆಡಗಿನ ಪ್ರಕೃತಿಗೆ ನಾವು ನಮ್ಮ ಕೃತಜ್ಞತೆ ಸಲ್ಲಿಸಬಹುದು. ಮನಃಪೂರ್ವಕವಾಗಿ ಸಲ್ಲಿಸುವ ಕೃತಜ್ಞತೆ ಉಲ್ಲಾಸವನ್ನುಂಟುಮಾಡುವುದು ನಿರ್ವಿವಾದ. ಆದರೆ ಬಹುತೇಕರು ಏಕಾಗ್ರತೆಯ ಉದ್ದೇಶದಿಂದ ಪ್ರಕೃತಿಯನ್ನು ತಮ್ಮ ಸ್ವರೂಪ ಹೇಗಿರುವುದೋ ಹಾಗೆಯೇ, ಉಡುಗೆತೊಡುಗೆ - ಆಭರಣಗಳಿಂದ ಸಜ್ಜುಗೊಳಿಸಿ ಆರಾಧಿಸುವ ಅಪೇಕ್ಷೆ ಹೊಂದುವುದು ಸೂಕ್ತವೇ. ಎಲ್ಲೆಲ್ಲೂ ದೇವಸ್ಥಾನ, ಚರ್ಚುಗಳಲ್ಲಿ ನೆರೆದಿರುವ ಜನಸ್ತೋಮ ಅಂಥ ಅಪೇಕ್ಷೆಯ ಸಂಕೇತವಲ್ಲದೆ ಬೇರಲ್ಲ.
ಪ್ರಕೃತಿಯನ್ನು ತನಗಿಷ್ಟವಾದ ವಿವಿಧ ನಾಮಗಳಿಂದ ಸ್ಮರಿಸುತ್ತಲೇ ಮುಂಜಾನೆ ಏಳುವುದು ನಮ್ಮಮ್ಮನಿಗೆ ತುಂಬಾ ಇಷ್ಟ. ಅದಕ್ಕೆ ಅನುಗುಣವಾಗಿ ಬೆಳಗಿನ ಅರಕ್ಕೂ ಮುನ್ನ ಅವರು ವಿಷ್ಣು ಸಹಸ್ರನಾಮ, ರಾಮರಕ್ಷಾ ಸ್ತೋತ್ರ, ಗಜೇಂದ್ರ ಮೋಕ್ಷ, ಕನಕಧಾರಾ ಸ್ತೋತ್ರ ಮುಂತಾದುವನ್ನು ಆಲಿಸಲು ಅನುಕೂಲ ಮಾಡಿಕೊಡುವುದು ನನ್ನ ಅಭ್ಯಾಸ.
ಈ ದಿನ ಅಮ್ಮ ಎಂದಿಗಿಂತ ಮುಂಚಿತವಾಗಿ ಎದ್ದು, ಭಾಗವತದಲ್ಲಿ ಸಂಭವಿಸುವ ಕೃಷ್ಣ - ಕುವಲಯಾಪೀಡ ಸಂಗ್ರಾಮದ ವಿಡಿಯೋ (Link: https://youtu.be/QpTHdmeeC5E?si=jlUPlTleXBb5vzen) ವನ್ನು ವೀಕ್ಷಿಸುವ ಅಪೇಕ್ಷೆ ವ್ಯಕ್ತಪಡಿಸಿದರು. ಇದಕ್ಕೂ, ವಾಡಿಕೆಯ ಸ್ತೋತ್ರಗಳ ಆಲಿಕೆಗೂ ತಕ್ಕ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾರ್ನಿಂಗ್ ವಾಕ್ ಸಲುವಾಗಿ ನಾನು ಹೊರಟೆ. ಮುಂಜಾನೆ ಸಮಯದಲ್ಲಿ ವಾಕ್ ಮಾಡಿದಾಗ ಲವಲವಿಕೆ ಸಂಜೆಗಿಂತ ಹೆಚ್ಚಾಗಿರುವ ಅನುಭವ ನಿಶ್ಚಿತ.