Tuesday 27 February 2024

ಬದುಕಿನ ಹಾದಿ - 6

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಸ್ವೀಕೃತಿ, ಕಲಿಕೆ ಹಾಗೂ ಪ್ರಗತಿಯೇ ಬದುಕು; ಸೋತು, ಆನಂತರ ಎದ್ದು ಪರಿಸ್ಥಿತಿಯನ್ನು ನಿಭಾಯಿಸುವುದೇ ಬದುಕು.

ನಮ್ಮಪ್ಪ ಸತ್ತಾಗ ನಮ್ಮ ಪುಟ್ಟ ಕುಟುಂಬದಲ್ಲಿ ವಯೋಮಾನ ನಮ್ಮಮ್ಮನಿಗೆ 29 ವರ್ಷ, ನನಗೆ ಆರೂವರೆ ವರ್ಷ, ನನ್ನ ತಂಗಿಗೆ ಮೂರೂವರೆ ವರ್ಷ, ಹಾಗೂ ಕೈಕೂಸಾಗಿದ್ದ ನನ್ನ ತಮ್ಮನಿಗೆ ಕೇವಲ ಒಂದೂವರೆ ತಿಂಗಳು - ಇಂತಿತ್ತು. ನಮ್ಮಪ್ಪನ ಟೈಲರಿಂಗ್ ಷಾಪನ್ನು ಅಲ್ಲಿದ್ದ ದರ್ಜಿಗಳು, ಮತ್ತಿತರ ಕೆಲಸಗಾರರಿಗೆ ತಿಂಗಳು ತಿಂಗಳು ಸಂಬಳ ಕೊಡುತ್ತ ಮುಂದುವರಿಸಿಕೊಂಡು ಹೋಗುವ ಚೈತನ್ಯ ನಮ್ಮಲ್ಲಿ ಯಾರಿಗೂ ಇರಲಿಲ್ಲ. ನಮ್ಮಜ್ಜಿ (ನಮ್ಮಮ್ಮನ ಅಮ್ಮ) ಬಂದು, ಮಗಳನ್ನು ತಾನೇ ಮೈಸೂರಿಗೆ ಕರೆದುಕೊಂಡು ಹೋಗುವೆನೆಂದಾಗ 'ಸೊಸೆಯ ಮೇಲೆ ತಮ್ಮದೇ ಅಧಿಕಾರ' ಎಂದು ವಾದಿಸದೆ ನಮ್ಮಜ್ಜಿ (ನಮ್ಮಪ್ಪನ ಅಮ್ಮ) ಸೌಹಾರ್ದದಿಂದ ಬೀಳ್ಕೊಟ್ಟರು.

ಆಗಿನ ಕಾಲದಲ್ಲಿ ಗಂಡ ದುಡಿದು ತಂದು ಹಾಕಿದರೆ ಮಾತ್ರ ಹೆಂಡತಿ ನಿರ್ಭಯದಿಂದ ಮಾಡಿ ಹಾಕಬಹುದಾದಂಥ ಪರಿಸ್ಥಿತಿಯಿತ್ತು. ಈಗಿನ ಹಾಗೆ ಹೆಂಡತಿ 'ದುಡಿದು ತರುವುದು ನನ್ನ ಕೆಲಸ, ಅಚ್ಚುಕಟ್ಟಾಗಿ ಮಾಡಿ ಹಾಕುವ ಜವಾಬ್ದಾರಿಯನ್ನು ನೀನು ವಹಿಸಿಕೊ' ಎಂದು ದಬಾಯಿಸುವುದು ಕನಸಿನ ಮಾತಾಗಿತ್ತು. ನಮ್ಮಪ್ಪನಿಲ್ಲವಾದ ಬಳಿಕ ತನ್ನ ಆಲೋಚನೆಯ ಶಕ್ತಿಯನ್ನು ಮೀರಿ ನಮ್ಮಮ್ಮ ದುಡಿಯುವ ಧೈರ್ಯವನ್ನೂ, ಮಾಡಿ ಹಾಕುವ ಶ್ರಮವನ್ನೂ ಒಗ್ಗೂಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಪರಿಸ್ಥಿತಿಯನ್ನು ಛಲದಿಂದ ಸ್ವೀಕರಿಸಲು ಮುಂದಾದ ನಮ್ಮಮ್ಮ, ಮೈಸೂರಿನ ಚಾಮುಂಡಿಪುರಂನಲ್ಲಿದ್ದ ಸೇಂಟ್ ಮೇರಿ ಶಾಲೆಗೆ ತೆರಳಿ, ಅಲ್ಲಿ ಮುಖ್ಯಸ್ಥೆಯಾಗಿದ್ದ ಸಿಸ್ಟರ್ ಸಿಸೀಲಿಯಾ ಅವರಲ್ಲಿ ಮನವಿ ಮಾಡಿಕೊಂಡರು. ಎಲ್ಲವನ್ನೂ ತಾಳ್ಮೆಯಿಂದ ಆಲಿಸಿದ ಸಿಸ್ಟರ್ ಸಿಸೀಲಿಯಾ, ಕನಿಷ್ಠ ವಿದ್ಯಾರ್ಹತೆ ಇದ್ದ ನಮ್ಮಮ್ಮನನ್ನು ಕುರಿತು 'ನಿನಗೆ ಸದ್ಯಕ್ಕೆ ನಮ್ಮ ಕಾನ್ವೆಂಟಿನ ಅಡುಗೆ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತೇನೆ. ನೀನು ಪ್ರತಿದಿನ ಸಂಜೆ ಮನೆಗೆ ಹಿಂದಿರುಗಿದ ನಂತರ ಓದಿಕೊಂಡು ಪ್ರೈವೇಟಾಗಿ ಮೆಟ್ರಿಕ್ ಪರೀಕ್ಷೆಗೆ ದಾಖಲಾಗು. ಅನಂತರ ನಿನಗೆ ಓರ್ವ ಟೀಚರ್ ಕೆಲಸ ಕೊಡುತ್ತೇನೆ' ಎಂದರು. ಮೆಟ್ರಿಕ್ ಪರೀಕ್ಷೆ ದಾಖಲಾತಿ ಮುಖೇನ ಸಾರ್ವಜನಿಕ ಸೇವೆ ನಿರ್ವಹಿಸುವ ಅರ್ಹತೆ (EPS - Eligibility for Public Services) ಆ ದಿನಗಳಲ್ಲಿ ಪ್ರಾಪ್ತವಾಗುತ್ತಿತ್ತು. ಹಿಂಜರಿಯದೆ, ಸೇಂಟ್ ಮೇರಿ ಶಾಲೆಯ ಬಾಣಸಿಗ ವೃತ್ತಿ ಹಾಗೂ ಮೆಟ್ರಿಕ್ ಶಿಕ್ಷಣಭ್ಯಾಸವನ್ನು ಏಕಕಾಲದಲ್ಲಿ ನಮ್ಮಮ್ಮ ಆರಂಭಿಸಿದರು. 

ಹಾಸನ ಜಿಲ್ಲಾ ಗ್ರಾಮವೊಂದರಲ್ಲಿ ಸರ್ಕಾರಿ ವೈದ್ಯರಾಗಿದ್ದ ನಮ್ಮ ಮಾವ ಡಾ. ರಾಮರಾಜು (ನಮ್ಮಮ್ಮನ ಅಣ್ಣ) 'ಮೆಟ್ರಿಕ್ ಜೊತೆಗೆ ಹಿಂದಿ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಲು ಪ್ರಯತ್ನಿಸು. ನೇರವಾದ ಸರ್ಕಾರಿ ಹುದ್ದೆ ಪಡೆಯಲು ಅದರಿಂದ ಸಹಾಯವಾಗುತ್ತದೆ' ಎಂದು ಸೂಚಿಸಿದಾಗ ಅದನ್ನೂ ಮನೋಬಲದಿಂದ ಕೈಗೆತ್ತಿಕೊಂಡು ಸ್ವಲ್ಪ ಕಾಲದಲ್ಲಿಯೇ ಸ್ನಾತಕೋತ್ತರ ಪದವಿಗೆ ಸರಿಸಮಾನವಾದ 'ಹಿಂದಿ ರತ್ನ' ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತೇರ್ಗಡೆಯಾದರು. ಹಿಂದಿ ಶಿಕ್ಷಕರ ಅಭಾವವಿದ್ದ ನಿಮಿತ್ತ ಸರ್ಕಾರವು ತಡಮಾಡದೆ, ಅವರು ಹಾಸನ ಜಿಲ್ಲಾ ಗ್ರಾಮವೊಂದರ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕಿ ಹುದ್ದೆ ನಿರ್ವಹಿಸತಕ್ಕದ್ದು ಎಂಬ ಆಜ್ಞೆ ಹೊರಡಿಸಿತು.

ಆ ವೇಳೆಗೆ ಸೇಂಟ್ ಮೇರಿ ಶಾಲೆಯ ಶಿಕ್ಷಕಿ ಹುದ್ದೆ ನಿರ್ವಹಿಸಿ ವಿದ್ಯಾರ್ಥಿಗಳಿಗೆ ಅತ್ಯಂತ ಅಚ್ಚುಮೆಚ್ಚು ಎಂಬ ಹಿರಿಮೆ ಸಂಪಾದಿಸಿದ್ದ ನಮ್ಮಮ್ಮನನ್ನು ಸಿಸ್ಟರ್ ಸಿಸೀಲಿಯಾ ಬೀಳ್ಕೊಟ್ಟದ್ದು ಒಲ್ಲದ ಮನಸ್ಸಿನಿಂದಲೇ.

No comments:

Post a Comment