ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/
ಮೇಲ್ಕಂಡ ಉಕ್ತಿಯ ಭಾವಾರ್ಥ: ಬೆಂಕಿಕಡ್ಡಿಯು ಇತರರನ್ನು ಬೆಳಗುವ ಮೊದಲು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ, ಸುಖ-ದುಃಖಗಳ ಜೊತೆ ಕಣ್ಣಾಮುಚ್ಚಾಲೆಯಾಡದ ಬದುಕಾದರೂ ಎಂಥದ್ದು?
ಹಾಸನ ಜಿಲ್ಲೆಯ ಬೇಲೂರು ರಸ್ತೆಯಲ್ಲಿದ್ದ ಕುಪ್ಪಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕಿಯಾಗಿ ನಮ್ಮಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿತ್ತು. ಗ್ರಾಮಸ್ಥರು ಉಚಿತ ವಸತಿ ಒದಗಿಸಲು ಸಿದ್ಧರಾಗಿದ್ದರೂ ಅದನ್ನು ಒಪ್ಪಿಕೊಳ್ಳುವಂತಿರಲಿಲ್ಲ. ನನ್ನ ಮತ್ತು ನನ್ನ ತಂಗಿಯ ಪ್ರಾಥಮಿಕ ಶಿಕ್ಷಣ ಪೂರ್ಣಗೊಂಡಿದ್ದು, ನಮ್ಮ ಮುಂದಿನ ಓದು ಆರಂಭಿಸುವ ದೃಷ್ಟಿಯಿಂದ ನಾವು ಹಾಸನದಲ್ಲಿರಬೇಕಾದ ಅನಿವಾರ್ಯತೆಯಿತ್ತು. ಹಾಸನದಲ್ಲಿ ಸಾಂಸಾರಿಕ ವೆಚ್ಚ, ಮನೆ ಬಾಡಿಗೆ ಹಾಗೂ ಮಕ್ಕಳ ಶೈಕ್ಷಣಿಕ ಅಗತ್ಯ ಅಮ್ಮನಿಗೆ ಗಹನವಾದ ಆಲೋಚನೆಯ ವಿಷಯಗಳಾಗಿದ್ದವು.
ಹಾಸನ್ ಸಿಟಿಯ ಅರಳೇಪೇಟೆ ಬಡಾವಣೆಯಲ್ಲಿದ್ದ ಬಾಡಿಗೆ ಮನೆಯಿಂದ ಕುಪ್ಪಳ್ಳಿಯ ಸರ್ಕಾರಿ ಪ್ರಾಥಮಿಕ ಪಾಠಶಾಲೆ 10 ಕಿ. ಮೀ. ದೂರದಲ್ಲಿತ್ತು. ಆ ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುತ್ತ ಹೋಗಿಬಂದು ಶಾಲಾಕರ್ತವ್ಯ ಪೂರೈಸಿ ಮನೆ ಖರ್ಚಿನ ತಕ್ಕಡಿ ತೂಗುವ ನಿರ್ಧಾರವನ್ನು ನಮ್ಮಮ್ಮ ತಳೆದರು. ಹಾಸನ ನೀರು ಸರಬರಾಜು ಇಲಾಖೆಯು ಸ್ಥಾಪಿಸಿದ ಕೊಳವೆಬಾವಿ ಅರ್ಧ ಕಿ. ಮೀ. ದೂರದಲ್ಲಿದ್ದು, ಅಲ್ಲಿಂದ ಬೆಳಗಿನ ಜಾವ 3 ಗಂಟೆಗೆ ನೀರು ಹಿಡಿದುಕೊಂಡು ಬಂದು ಮುಸುರೆ ತಿಕ್ಕಿ, ಸ್ನಾನ - ಅಡುಗೆ ಪೂರೈಸಿ, ಬಟ್ಟೆ ಒಗೆದು, ಮಕ್ಕಳೊಂದಿಗೆ ಉಪಹಾರ ಮುಗಿಸಿ, ಮಧ್ಯಾಹ್ನದ ಊಟಕ್ಕೆ ಲಂಚ್ ಬಾಕ್ಸ್ ತೆಗೆದುಕೊಂಡು ಡ್ಯೂಟಿ ಸಲುವಾಗಿ ಬೆಳಿಗ್ಗೆ 8 ಗಂಟೆಗೆ ಮನೆ ಬಿಡುವ ದಿನಚರಿಗೆ ಅಮ್ಮ ಹೊಂದಿಕೊಂಡರು. ಅವರೊಂದಿಗೆ ಪ್ರತಿದಿನ ಬೆಳಗಿನ ಜಾವ 3 ಗಂಟೆಗೆ ನೀರು ಹೊರುವ ಕಾಯಕಕ್ಕೆ ನಾನು ಮತ್ತು ನನ್ನ ತಂಗಿ ಸಹ ಸಜ್ಜಾದೆವು.
ಕುಪ್ಪಳ್ಳಿ ಶಾಲೆಯಲ್ಲಿ ಸಹೋಪಾಧ್ಯಾಯರಾಗಿದ್ದ ಶೇಷಾದ್ರಿ ಅಯ್ಯಂಗಾರ್ ಕುಟುಂಬದ ಸ್ಥಿತಿ ಸಹ ನಮ್ಮ ಕುಟುಂಬವನ್ನೇ ಹೋಲುತ್ತಿತ್ತು. ಕುಪ್ಪಳ್ಳಿ ಸಮೀಪದಲ್ಲಿದ್ದ ವುದ್ದೂರು ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಶಿಕ್ಷಕಿ ಫಿಲೋಮಿನ ಅವರ ಮನೆಯ ಪಾಡು ನಮಗಿಂತ ಭಿನ್ನವೇನೂ ಆಗಿರಲಿಲ್ಲ. ಇನ್ನು ಕೇಳುವುದೇನಿದೆ, ಗದ್ದೆಹಳ್ಳವನ್ನು ಹಾಯುತ್ತ 10 ಕಿ. ಮೀ. ಕಾಲ್ನಡೆಯುತ್ತಾ ದಿನವೂ ಶಾಲೆ ತಲುಪುವ ಕ್ರಮಕ್ಕೆ ನಮ್ಮಮ್ಮನೂ, ಇನ್ನಿಬ್ಬರೂ ಒಬ್ಬರಿಗಿನ್ನೊಬ್ಬರು ಸಹಾಯಕರಾದರು.
ಅದೇ ಕ್ರಮದಲ್ಲಿ ಸಮಯ ಉರುಳುತ್ತಿದ್ದಂತೆ ನಾನು ಹೈಸ್ಕೂಲ್ ಶಿಕ್ಷಣ ಪೂರೈಸಿ ಕಾಲೇಜಿಗೆ ಕಾಲಿಡುವ ಹಂತ ತಲುಪಿದೆ. ಹಾಸನ್ ಸಿಟಿಯ ಹೊರವಲಯದಲ್ಲಿದ್ದ ಎಸ್ ಎಲ್ ವಿ ತಾಂತ್ರಿಕ ವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗುವ ಅವಕಾಶ ನನಗೆ ಪ್ರಾಪ್ತವಾಯಿತು. ಅನಂತರ ನನಗೆ ಜೊತೆಯಾದ ಮಿತ್ರ ಶ್ಯಾಮಸುಂದರನೊಂದಿಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಮನೆ ಬಿಟ್ಟು, ಗದ್ದೆಹಳ್ಳ ಹಾಯುತ್ತ ನಡೆದು 4 ಕಿ. ಮೀ. ಸಾಗಿ ಶಿಕ್ಷಣಕೇಂದ್ರ ತಲುಪುವ ಪದ್ಧತಿಗೆ ನಾನು ಬದ್ಧನಾದೆ.
ನನ್ನ ತಾಂತ್ರಿಕ ಕಲಿಕೆ ಪೂರ್ಣವಾಗುವ ವೇಳೆಗೆ ನಮ್ಮಮ್ಮನಿಗೆ ಕರುಗುಂದ ಎಂಬ ಗ್ರಾಮಕ್ಕೆ ವರ್ಗವಾದ್ದರಿಂದ ನಾವು ಮನೆ ಬದಲಾಯಿಸಿ, ಕರುಗುಂದಕ್ಕಿಂತ ಉತ್ತಮ ಸ್ಥಾನವೆನಿಸಿದ್ದ ಹಾರನಹಳ್ಳಿ ಎಂಬಲ್ಲಿಗೆ ವಲಸೆ ಹೋಗುವಂತಾಯಿತು. ಜಾವಗಲ್ ರಸ್ತೆಯಲ್ಲಿದ್ದ ಕರುಗುಂದಕ್ಕೂ, ಹಾರನಹಳ್ಳಿಗೂ ಮಧ್ಯದ 4 ಕಿ. ಮೀ. ಹಾದಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಕಾಲ್ನಡಿಗೆ ಮೂಲಕವೂ, ಮಾರ್ನಿಂಗ್ ಕ್ಲಾಸ್ ಇದ್ದ ಶನಿವಾರದಂದು ಬಸ್ ಪ್ರಯಾಣದ ಮೂಲಕವೂ ಕ್ರಮಿಸುವ ಅಭ್ಯಾಸ ಬೆಳೆಸಿಕೊಂಡ ಅಮ್ಮ, ತಮ್ಮ ಶಾಲಾಶಿಕ್ಷಕಿ ಕರ್ತವ್ಯವನ್ನು ಕರಾರುವಾಕ್ಕಾಗಿ ನಿರ್ವಹಿಸಿದರು.
ಹಾರನಹಳ್ಳಿ ಓರ್ವ ಸಚಿವನನ್ನು (ಹಾರನಹಳ್ಳಿ ರಾಮಸ್ವಾಮಿ) ಕರ್ನಾಟಕ ಸರ್ಕಾರಕ್ಕೆ ನೀಡಿದ ಖ್ಯಾತಿಗೂ, ಜಾವಗಲ್ ಓರ್ವ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ (ಫಾಸ್ಟ್ ಬೌಲರ್ ಜಾವಗಲ್ ಶ್ರೀನಾಥ್)ನನ್ನು ಭಾರತಕ್ಕೆ ಒದಗಿಸಿದ ಹಿರಿಮೆಗೂ ಪಾತ್ರವಾಗಿವೆ.
No comments:
Post a Comment