Sunday 3 March 2024

ಬದುಕಿನ ಹಾದಿ - 8

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಜೀವನದಲ್ಲಿ ಯಾರನ್ನೂ ದೂಷಿಸಬೇಡಿ, ಏಕೆಂದರೆ ಒಳ್ಳೆಯವರಿಂದ ಸಂತೋಷವನ್ನೂ, ಕೆಟ್ಟವರಿಂದ ಬದುಕಿನ ಅನುಭವವನ್ನೂ ನೀವು ಸಂಪಾದಿಸುವುದು ನಿಶ್ಚಿತ.

ವಿದ್ಯಾರ್ಥಿ ದೆಸೆಯ ನಂತರ ನಾನು ಉದ್ಯೋಗದ ಬೇಟೆ ಆರಂಭಿಸಿದ್ದ ದಿನಗಳವು. ದೂರದ ರಾಮೇಶ್ವರಕ್ಕೆ ತೆರಳಿ, ರಾಮನಾಥಪುರಂ ಟ್ರಸ್ಟ್ ಎಂಬ ಧಾರ್ಮಿಕ ಕೇಂದ್ರದಲ್ಲಿ ಸಂದರ್ಶನಕ್ಕೆ ಹಾಜರಾಗಿ ತಿರುವಾಡಾನೈ ಎಂಬಲ್ಲಿ ಸಿವಿಲ್ ಇಂಜಿನಿಯರ್ ಹುದ್ದೆ ನಿರ್ವಹಿಸಲು ನಾನು ಆಯ್ಕೆಯಾದೆ (ಅಲ್ಲಿನ ಅನುಭವ ಕುರಿತು ನಾನು ಬರೆದ ಅಂತರ್ಜಾಲ ಅಂಚೆಯ ಲಿಂಕ್: https://allinmycircle.blogspot.com/2019/05/memories-never-die.html).

ಅಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಒಮ್ಮೆ ನಮ್ಮಮ್ಮ ಮತ್ತು ಅವರ ಸ್ನೇಹಿತೆ ಅಚ್ಚಮ್ಮ ತೀರ್ಥಯಾತ್ರೆ ಸಲುವಾಗಿ ಬಂದರು. ಆ ಸಂದರ್ಭದಲ್ಲಿ ತ್ರಿವಿಕ್ರಮ ಅಯ್ಯರ್ ಎಂಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಆಗಮಿಸಿ ನಮ್ಮಮ್ಮನನ್ನು ಭೇಟಿಯಾದ. ತೀರ್ಥಯಾತ್ರೆಗೆ ಆಗಮಿಸಿದ ಆತ ಆ ಊರಿನಲ್ಲಿ ಯಾರನ್ನೋ ನೋಡಬೇಕಿತ್ತಂತೆ. ನೋಡಲು ಸಾಧ್ಯವಾಗದೆ ಮನೆಯ ಬೀಗಮುದ್ರೆ ಕಂಡು ಕಂಗಾಲಾಗಿ ನಮ್ಮಲ್ಲಿಗೆ ಬಂದನಂತೆ. ನಮ್ಮ ಮನೆಯ ಜಗಲಿಯ ಮೇಲೆ ಒಂದೆರಡು ದಿನ ಉಳಿದು ನೋಡಬೇಕಾದವರನ್ನು ನೋಡಿಯೇ ಹಿಂದಿರುಗಲು ನಿರ್ಧರಿಸಿದನಂತೆ. ಯಾತ್ರಾರ್ಥಿಗಳಿಗೆ ಅಂಥ ಸನ್ನಿವೇಶಗಳು ಸಹಜವಾದ್ದರಿಂದ, ಆ ಕುಟುಂಬದ ಗಲಿಬಿಲಿಯನ್ನು ನಿವಾರಿಸುವುದು ಅತ್ಯಗತ್ಯವಾದ ನಿಮಿತ್ತ, ಆತನ ಕೋರಿಕೆಯನ್ನು ನಮ್ಮಮ್ಮ ಮನ್ನಿಸಿದರಂತೆ.

ಅಂದು ಅಚ್ಚಮ್ಮ ತಯಾರಿಸುವೆನೆಂದಿದ್ದ, ನಮ್ಮ ಕುಟುಂಬಕ್ಕೆ ಅಪರೂಪವಾದ ಖಾದ್ಯ ರಾಗಿಮುದ್ದೆಯೊಂದಿಗೆ ನಮ್ಮಮ್ಮ ನನ್ನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ನಾನು ಮನೆ ಪ್ರವೇಶಿಸುವ ಮುನ್ನ ಸುಸಂಸ್ಕೃತರೆಂದು ತೋರುತ್ತಿದ್ದ ಅಪರಿಚಿತರನ್ನು ಜಗಲಿಯ ಮೇಲೆ ಕಂಡು ಚಕಿತನಾದೆ. ಆ ಮೂವರ ಪೈಕಿ ಮಹಿಳೆ ಸ್ವಂತ ಕಾರ್ಯದಲ್ಲಿ ಮಗ್ನರಾಗಿರುವಲ್ಲಿ, ಪುರುಷ ಹಾಗೂ ಬಾಲಕಿ ದಿಟ್ಟಿಸಿ ನೋಡುತ್ತ ನನ್ನ ಬರವನ್ನು ಗಮನಿಸುತ್ತಿದ್ದರು. ಮನದಿಂಗಿತವನ್ನು ನಿಯಂತ್ರಿಸಿಕೊಳ್ಳುತ್ತ ಮಾತನಾಡದೆ ಮನೆಯೊಳಕ್ಕೆ ನಾನು ಬಂದ ತಕ್ಷಣ ಅಮ್ಮ, ಆಹ್ವಾನ ಇಲ್ಲದೆ ಆಗಮಿಸಿದ ಆ ಅತಿಥಿಗಳು ಎದುರಿಸುತ್ತಿದ್ದ ಪರಿಸ್ಥಿತಿಯನ್ನೂ, ಆ ಕುರಿತು ತಾನು ಕೈಗೊಂಡ ತೀರ್ಮಾನವನ್ನೂ ವಿವರಿಸಿದರು. ಅಮ್ಮ ನನ್ನೊಂದಿಗೆ ಮಾತನಾಡುತ್ತಿರುವಾಗ ಅಡುಗೆ ಮನೆಯಿಂದ ಖಾದ್ಯದ ಪಾತ್ರೆಗಳೊಂದಿಗೆ ಬಂದ ಅಚ್ಚಮ್ಮ 'ಅತಿಥಿಗಳಿಗೆ ಬಡಿಸಿಬಿಡುತ್ತೇನೆ' ಎಂದು ಸಂಜ್ಞೆಯ ಮೂಲಕ ಸೂಚಿಸುತ್ತ ಜಗಲಿಯತ್ತ ಸಾಗಿದರು.

ಕೆಲವೇ ನಿಮಿಷಗಳಲ್ಲಿ ಜಗಲಿಯೆಡೆಯಿಂದ ಕೇಕೆ ಹಾಕಿ ನಗುವ ಸದ್ದು ಕೇಳಿಸಿತು. ನಾನು, ಅಮ್ಮ ಮನೆಯೊಳಗಿಂದ ಹೊರಕ್ಕೆ ಧಾವಿಸಿದೆವು. ನಮ್ಮನ್ನು ನೋಡಿದ ಬಳಿಕ ತ್ರಿವಿಕ್ರಮ ಅಯ್ಯರ್ ಅಚ್ಚಮ್ಮನವರತ್ತ ಬೆರಳು ತೋರಿ 'ಗಾಜುಗಳಿ ಅಚ್ಚಮ್ಮ' ಎಂದು ಕೂಗುತ್ತ ತನ್ನ ನಗೆಯ ಅಬ್ಬರವನ್ನು ಮತ್ತೂ ಹೆಚ್ಚಿಸಿದ. ತಬ್ಬಿಬ್ಬಾದ ಅಚ್ಚಮ್ಮ ತಮ್ಮ ಕೈಲಿದ್ದ ರಾಗಿಮುದ್ದೆಯ ಪಾತ್ರೆಯನ್ನು ನಮ್ಮ ಮುಂದೆ ಹಿಡಿದರು. ಅದರಲ್ಲಿ ಮುದ್ದೆ ಎಂದಿನ ಚೆಂಡಿನ ಆಕಾರದಲ್ಲಿರದೆ ಗಾಜಿನ ಹಳಿಯ ರೂಪದಲ್ಲಿ ಹರಡಿಕೊಂಡಿತ್ತು. ಮುದ್ದೆಯನ್ನು ಉಂಡೆ ಕಟ್ಟದೆ ಹಾಗೇ ಸೌಟಿನಿಂದೆತ್ತಿ ಬಡಿಸುವ ಉದ್ದೇಶ ಅಚ್ಚಮ್ಮನವರಿಗಿದ್ದಿರಬೇಕು, ಅದು ಅತಿಥಿಗೆ ವಿಚಿತ್ರವಾಗಿ ಕಂಡು ಆ ಉದ್ಗಾರ ಆತನ ಬಾಯಿಂದ ಹೊರಬೀಳಲು ಕಾರಣವಾಗಿರಬೇಕು. ಆತ ತಮಿಳಿನಲ್ಲಿ 'ಗಾಜು' ಎಂಬ ಪೂರ್ವ ಪದವನ್ನೂ, 'ಕಳಿ' ಎಂಬ ಉತ್ತರ ಪದವನ್ನೂ ಬಳಸಿ ಅದರ ಆದೇಶ ರೂಪವಾದ 'ಗಾಜುಗಳಿ' ಎಂಬ ಉದ್ಗಾರ ಹೊರಡಿಸಿದ್ದ. ಮುದ್ದೆಯನ್ನು ತಮಿಳಿನಲ್ಲಿ 'ಕಳಿ' ಎನ್ನುತ್ತಾರೆ.

ಒಂದೆರಡು ಗಂಟೆಗಳಷ್ಟು ಸಮಯ ಉರುಳುವುದರೊಳಗೆ ತ್ರಿವಿಕ್ರಮ ಅಯ್ಯರ್ ಸಂಸಾರ ನಮ್ಮಮ್ಮ ಹಾಗೂ ಅಚ್ಚಮ್ಮನವರಿಗೆ ಅತ್ಯಂತ ಹತ್ತಿರವಾಗಿಬಿಟ್ಟಿತ್ತು. 'ಕಳೆದ ಹತ್ತು ವರ್ಷಗಳಲ್ಲಿ ಮನೆಯಲ್ಲಿ ತಾನು ಒಮ್ಮೆಯೂ ಹೆಂಗಸರಿಗೆ ಅಡುಗೆ ಮಾಡಲು ಬಿಟ್ಟಿಲ್ಲ. ತನ್ನ ಅಡುಗೆ ಕೈಚಳಕವೇ ಅಂಥದ್ದು. ಅದರ ರುಚಿ ನೋಡಲು ದಿನವೂ ಮನೆ ಮುಂದೆ ಪರಿಚಿತರು ಕ್ಯೂ ನಿಲ್ಲುತ್ತಿದ್ದರು' ಎಂದು ಪತ್ನಿ, ಪುತ್ರಿಯ ಕಡೆ ನೋಡುತ್ತಾ ತ್ರಿವಿಕ್ರಮ ಅಯ್ಯರ್ ಸ್ವಪ್ರತಿಷ್ಠೆ ಮೆರೆದನಂತೆ!

ಅಚ್ಚಮ್ಮ ಕುತೂಹಲ ಹತ್ತಿಕ್ಕಲಾರದೆ, 'ಅವಕಾಶ ನೀಡಿದರೆ ಈ ಮನೆಯಲ್ಲೂ ಅಡುಗೆಗೆ ತಾವು ಸಿದ್ಧರೇನೋ' ಎಂದುಬಿಟ್ಟರಂತೆ. ಆ ಸಂದರ್ಭದಲ್ಲಿ ಜೀವನ ಪೂರ್ತಿ ಅಡುಗೆ ಮಾಡಿ ಹಣ್ಣಾದ ಭಾವ ನಮ್ಮಮ್ಮನ ಮುಖದಿಂದಲೂ ಇಣುಕುತ್ತಿದ್ದಿತ್ತಂತೆ. ಅಚ್ಚಮ್ಮನವರ ಆ ಮಾತಿಗೇ ಕಾಯುತ್ತಿದ್ದನೇನೋ ಎಂಬಂತೆ ಠಣ್ಣನೆ ಜಗಲಿಯಿಂದ ಮನೆಯೊಳಕ್ಕೆ ಜಿಗಿದ ತ್ರಿವಿಕ್ರಮ ಅಯ್ಯರ್, 'ಮೈತ್ರೀ ಅದು ಕೊಂಡುವಾಡೀ, ಇದು ಕೊಂಡುವಾಡೀ (ಮೈತ್ರೀ ಅದನ್ನು ತೊಗೊಂಡು ಬಾರೇ, ಇದನ್ನು ತೊಗೊಂಡು ಬಾರೇ)' ಎಂದು ಮಗಳಿಗೆ ಆರ್ಡರ್ ಮಾಡುತ್ತ ಆಶ್ಚರ್ಯಕರವಾದ ರೀತಿಯಲ್ಲಿ ಅಡುಗೆಮನೆ ಉಸ್ತುವಾರಿಗೆ ಸನ್ನದ್ಧನಾಗಿ ನಿಂತುಬಿಟ್ಟನಂತೆ!!!

ರಾತ್ರಿ ಕಾರ್ಯಕ್ಷೇತ್ರದಿಂದ ಹಿಂದಿರುಗಿದ ಬಳಿಕ ವಿಶೇಷ ಭಕ್ಷ್ಯಗಳ ಸ್ವಾಗತ ದೊರೆತ ನಿಮಿತ್ತ, ಜಗಲಿಯಿಂದ ಎದ್ದುಬಂದು ಮನೆಯೊಳಗೇ ಸೆಟ್ಲ್ ಆಗಿಬಿಟ್ಟ ಅಪರಿಚಿತ ಅತಿಥಿಗಳನ್ನು ಟೀಕಿಸಲು ನಾನು ಮುಂದಾಗಲಿಲ್ಲ. ಹಾಗೇ ಎರಡು ದಿನ ಮುಂದುವರಿದ ನಂತರ ಆ ಅತಿಥಿಗಳು ಪ್ರತ್ಯೇಕವಾಗಿ ನಮ್ಮಮ್ಮನೊಂದಿಗೆ 'ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?' ಎಂದು ಪ್ರಶ್ನಿಸಿದರಂತೆ. ಅಲ್ಲೇ ಇದ್ದ ಅಚ್ಚಮ್ಮ ಒಡನೆಯೇ, 'ಅವಳಿಗೂ ನಿಮ್ಮ ಮಗನಿಗೂ ಒಳ್ಳೆಯ ಜೋಡಿಯಾಗುತ್ತದೆ' ಎಂದು ನಮ್ಮಮ್ಮನ ಬೆನ್ನು ತಟ್ಟಿದರಂತೆ!

ನಂತರ ನೇರವಾಗಿ ತ್ರಿವಿಕ್ರಮ ಅಯ್ಯರ್ 'ನನ್ನ ಮಗಳು ಮೈತ್ರಿಯನ್ನು ಕುರಿತು ನಿಮ್ಮಮ್ಮನ ಸಂಗಡ ಮಾತನಾಡಿದ್ದೇನೆ' ಎಂದು ಆರಂಭಿಸಿದ ಆತನ ಇಂಗಿತವನ್ನು ಅರ್ಥ ಮಾಡಿಕೊಂಡು ಸಂಭಾಷಣೆಯನ್ನು ಮುಂದುವರಿಯಲು ನಾನು ಬಿಡಲಿಲ್ಲ. 'ಈ ಟ್ರಸ್ಟಿನ ನನ್ನ ಉದ್ಯೋಗ ತಾತ್ಕಾಲಿಕ. ಅದನ್ನು ಪರಿಶಿಷ್ಟ ಜಾತಿಯ ಅಭ್ಯರ್ಥಿ ದೊರೆತ ತಕ್ಷಣ ಬಿಟ್ಟುಕೊಟ್ಟು ಹೊರಟರೆ ಭಾರತದಲ್ಲಿ ನಾನೆಲ್ಲಿ ನೆಲೆಸುತ್ತೇನೆಯೋ ಹೇಳಲಾರೆ. ತಮಿಳುನಾಡಿನಲ್ಲಿರುವ ಸಾಧ್ಯತೆ ತೀರಾ ಕಡಿಮೆ' ಎಂದು ನಾನು ಪ್ರತಿಕ್ರಿಯಿಸಿದಾಗ ಪ್ರಕಟವಾದ ಆತನ ಮುಖಭಾವ ಮಾಮೂಲಿ ತಮಿಳರಿಗಿಂತ ವಿಭಿನ್ನವಾಗಿಯೇನೂ ಇರಲಿಲ್ಲ. ಬಹುತೇಕ ತಮಿಳರು ಅನ್ಯ ಭಾಷಾ ಪ್ರಾಂತದ ಗಂಡುಗಳಿಗೆ ಹೆಣ್ಣು ಕೊಡುವುದಿಲ್ಲ. ಮರುದಿನ ಬೆಳಿಗ್ಗೆ ಆ ಸಂಸಾರ ನಮಗೆ ಟಾಟಾ ಹೇಳಿ ಹೊರಟುಹೋಯಿತು.

No comments:

Post a Comment