Wednesday 6 March 2024

ಬದುಕಿನ ಹಾದಿ - 9

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಈ ಜೀವನದಲ್ಲಿ ತಾಯಿಯ ಪ್ರೀತಿಯೇ ಶ್ರೇಷ್ಠ, ಅವಳೇ ದೇವಾಲಯ, ಅವಳೇ ಪೂಜೆ ಮತ್ತು ಅವಳೇ ಸಮಸ್ತ ಜಗತ್ತು.

ವಿದ್ಯಾರ್ಥಿಗಳ ಕಾಲುಕಾಲಿನ ಮೇಲೆ ಹೊಡೆದು ಅವರ ಅಂಗಸಾಧನೆ ಮಟ್ಟವನ್ನು ಸುಧಾರಿಸುವ ಪ್ರಯತ್ನದಲ್ಲಿ NCC ತರಬೇತುದಾರರು ಹಾಗೂ ಡ್ರಿಲ್ ಮಾಸ್ಟರ್ ಸದಾ ಇರುವರೆಂಬ ಕುಖ್ಯಾತಿಯನ್ನು ಶಾಲಾಕಾಲೇಜುಗಳು ಹೊತ್ತಿದ್ದ ದಿನಗಳವು. 'ನಾನು ಅಂಥವನಲ್ಲವೇ ಅಲ್ಲ' ಎಂದು ವಾದಿಸಿದರು ನನ್ನ ತಂಗಿಯನ್ನು ಮದುವೆಯಾಗಲಿದ್ದ ವರ, ಡ್ರಿಲ್ ಮಾಸ್ಟರ್ ಶ್ರೀನಿವಾಸರಂಗಯ್ಯಂಗಾರ್.

ಆ ಸಂದರ್ಭದಲ್ಲಿ ನಮ್ಮಮ್ಮನ ಗಮನವಿದ್ದುದು ತಮ್ಮ ಗೃಹಕಾರ್ಯ, ಕಿಮೀಗಟ್ಟಲೆ ನಡೆದಾಟ ಹಾಗೂ ಶಾಲಾಕರ್ತವ್ಯಗಳ ಮೇಲೆ. ನನ್ನ ಮತ್ತು ನನ್ನ ತಂಗಿಯ ಲಕ್ಷ್ಯ ಕೇಂದ್ರೀಕೃತವಾಗಿದ್ದುದು ನಮ್ಮನಮ್ಮ ಉದ್ಯೋಗಗಳ ಮೇಲೆ. ಆ ಹಿನ್ನೆಲೆಯಲ್ಲಿ ಜವಾಬ್ದಾರಿ ವಹಿಸಿಕೊಂಡು, ಅಮ್ಮನ ಸಂಬಳ ಬಂದ ತಕ್ಷಣ ನಿಯಮಿತ ವೆಚ್ಚಗಳನ್ನು ನನ್ನ ತಮ್ಮ ನಿಭಾಯಿಸುತ್ತಿದ್ದ. ವಿದ್ಯಾರ್ಥಿಯಾಗಿರಬೇಕಾದ ಸಮಯದಲ್ಲಿ ಹಣಕಾಸು ಉಸ್ತುವಾರಿಯ ಹೊರೆ ಹೆಗಲೇರಿದ್ದರಿಂದ ಅವನು ಮೆಟ್ರಿಕ್ ನಪಾಸಾದ ನಂತರ ಮುಂದಕ್ಕೆ ಓದಲಾಗಲಿಲ್ಲ.

ಓದು ಮುಂದುವರಿಸಲಾರದವರು ಪ್ರಪಂಚ ಜ್ಞಾನದಲ್ಲಿ ಓದಿದವರಿಗಿಂತ ಮಿಗಿಲು. ಅಂಥ ಒಂದು ಪ್ರತಿಭೆಯಾಗಿ ನನ್ನ ತಮ್ಮ ಅಭಿವೃದ್ಧಿಗೊಳ್ಳುತ್ತಿರುವನೆಂದು ನಾವು ನಂಬಿದ್ದ ಕಾಲದಲ್ಲಿ ನಾನು ಮದುವೆಯಾದೆ. ಮಹಾರಾಷ್ಟ್ರ ಸರ್ಕಾರದ ಒಂದು ತಾತ್ಕಾಲಿಕ ಹುದ್ದೆಯನ್ನು ನಾನಾಗ ನಿರ್ವಹಿಸುತ್ತಿದ್ದೆ. ಮದುವೆಯಾದ ಒಂದೆರಡು ತಿಂಗಳೊಳಗೇ ಮಹಾರಾಷ್ಟ್ರದ ಜೀವನಶೈಲಿ ರುಚಿಸದ ನನ್ನ ಪತ್ನಿ ಕರ್ನಾಟಕಕ್ಕೆ ಹಿಂದಿರುಗಿದಳು. ಅನಂತರ ಅವಳು ನನ್ನ ತಮ್ಮನಿಗಿದ್ದ ಒಂದು ದುಶ್ಚಟವನ್ನು ಕಂಡುಹಿಡಿದು ತಿಳಿಸಿದಾಗ ನಮ್ಮಮ್ಮ ಕ್ಷಣಕಾಲ ಚಿಂತಿತರಾದರೂ,  ಅವನು ನಿರ್ವಹಿಸುತ್ತಿದ್ದ ಮನೆಯ ಹಣಕಾಸು ವ್ಯವಹಾರದಲ್ಲಿ ಯಾವುದೇ ಕೊರತೆ ಇಲ್ಲದ್ದನ್ನು ನೆನೆದು ಆ ವ್ಯಥೆಯನ್ನು ತ್ಯಜಿಸಿದರು.

ನಾನು ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಸೇರಿದ ಒಂದೆರಡು ತಿಂಗಳ ನಂತರ ಅಲ್ಲಿನ ಆಪ್ತ ತಾಂತ್ರಿಕ ಸಹಾಯಕ ಇಂಜಿನಿಯರ್ ನಿವೃತ್ತಿ ಹೊಂದಿದರು. ಆ ಸ್ಥಾನವನ್ನು ನಾನು ನಿರ್ವಹಿಸುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದಾಗ ನಾನು ಆಶ್ಚರ್ಯಚಕಿತನಾದೆ. ಮರಾಠಿ ಭಾಷೆಗೆ ನಾನು ಹೊಂದಿಕೊಳ್ಳುವುದು ಸ್ವಲ್ಪ ನಿಧಾನವೇ ಆಗಿದ್ದರೂ ಆಂಗ್ಲ ಭಾಷೆಯ ಮೇಲೆ ನಾನು ಹೊಂದಿದ್ದ ಹಿಡಿತವನ್ನು ಗಮನಿಸಿ ಆ ಆದೇಶವನ್ನು ನನಗೆ ನೀಡಲಾಗಿತ್ತು. ಬೃಹತ್ ನೀರಾವರಿ ಯೋಜನೆಗಳ ಅನ್ವೇಷಣೆ ಜವಾಬ್ದಾರಿಗೆ ಬದ್ಧರಾಗಿದ್ದ ಆ ಚಾಣಾಕ್ಷ ಎಕ್ಸಿಕ್ಯೂಟಿವ್ ಇಂಜಿನಿಯರ್ ವಾರ್ಷಿಕ ವರದಿಯಲ್ಲಿ ನನ್ನ ಸಹಾಯಕ ವೃತ್ತಿ ಉತ್ತಮವೆಂದು ದಾಖಲಿಸಿದ ನಿಮಿತ್ತ, ಕ್ಲಿಷ್ಟಕರವಾದ ಕರ್ತವ್ಯಗಳಿಗೆ ಹೆಸರುವಾಸಿಯಾದ ಆ ನನ್ನ ಹುದ್ದೆ ಖಾಯಂ ಆಯಿತು. ಆಗ್ಗೆ ನಾವು ವರದಿ ಸಲ್ಲಿಸಿದ 'ಮೋರ್ಬಾ' ಜಲಾಶಯದ ನಿರ್ಮಾಣ ಪೂರ್ಣಗೊಂಡು, ಅದೀಗ ಬೃಹತ್ ಮುಂಬಯಿಯ ಕುಡಿಯುವ ನೀರು ಸರಬರಾಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದೇ ರೀತಿ, ನಾವು ಅನ್ವೇಷಿಸಿದ 'ಹೆಟವಣೆ' ಜಲಾಶಯದ ನೀರು ಮುಂಬಯಿ ಮತ್ತು ಪೂನಾ ನಡುವೆ ಅಗಾಧವಾಗಿ ಹರಡಿರುವ ಕೃಷಿ ಕ್ಷೇತ್ರದ ಅಗತ್ಯಗಳನ್ನು ಅತ್ಯುತ್ತಮವಾಗಿ ಪೂರೈಸುತ್ತಿದೆ.

ಆ ಇಲಾಖೆಯಲ್ಲಿ ನನ್ನ ನಾಲ್ಕು ವರ್ಷಗಳ ಸೇವೆಯ ನಂತರವೂ ನನ್ನ ಪತ್ನಿ ಹಿಂದಿರುಗಲಿಲ್ಲ. ಮಹಾರಾಷ್ಟ್ರದಲ್ಲಿ ನೆಲೆಸುವುದು ಅವಳಿಗೆ ಸುತರಾಂ ಇಷ್ಟವಿರಲಿಲ್ಲ. 'ಅವಳಿಗೆ ಇಷ್ಟವಿಲ್ಲದಿದ್ದರೆ ನಿನ್ನದಾದರೂ ಏನು ಹಠ, ಕರ್ನಾಟಕಕ್ಕೆ ಹಿಂದಿರುಗಿ ಯಾವುದಾದರೂ ಕೆಲಸ ಹುಡುಕಿಕೊ' ಎಂದು ನಮ್ಮಮ್ಮ ಸೂಚಿಸಿದಾಗ ಆ ಕುರಿತು ನಾನು ತೀವ್ರವಾಗಿ ಆಲೋಚಿಸತೊಡಗಿದೆ. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಖಾಸಗಿ ಹುದ್ದೆಗಳಲ್ಲಿ ಆಶ್ವಾಸನೆ ಶೂನ್ಯ. ಅವುಗಳನ್ನು ಅರಿಸಿಕೊಂಡರೆ ಕೆಲಸದಿಂದ ಕೆಲಸಕ್ಕೆ ಹಾರುತ್ತ, ಮಧ್ಯೆಮಧ್ಯೆ ನಿರುದ್ಯೋಗದ ಸಂಕಷ್ಟವನ್ನೂ ಅನುಭವಿಸುತ್ತಿರಬೇಕಾಗುತ್ತದೆ (ಇದನ್ನು ಕುರಿತು ನಾನು ಬರೆದ ಅಂತರ್ಜಾಲ ಅಂಚೆಯ ಲಿಂಕ್: https://www.speakingtree.in/allslides/ups-and-downs-of-a-civil-engineer). 




No comments:

Post a Comment