Friday 8 March 2024

ಬದುಕಿನ ಹಾದಿ - 10

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಸೋಲಿನ ಮೇಲೆ ಸೋಲು ಎದುರಾಗುತ್ತಿದ್ದರೂ ಧೈರ್ಯಗೆಡಬೇಡಿ, ಪರಿಸ್ಥಿತಿಗಳಿಗೆ ತಲೆಬಾಗದೆ ಕಾರ್ಯ ನಿರ್ವಹಿಸುತ್ತಿರಿ, ಸಂಕಲ್ಪವನ್ನೆಂದಿಗೂ ಕೈಬಿಡಬೇಡಿ.

ಅಮ್ಮನ ಆದೇಶಕ್ಕೆ ಓಗೊಟ್ಟು, ಹೆಂಡತಿಯ ಅಪೇಕ್ಷೆಗೆ ಅನುಗುಣವಾಗಿ, ಮಹಾರಾಷ್ಟ್ರ ಸರ್ಕಾರದ ನೌಕರಿ ತೊರೆದು ನಾನು ಕರ್ನಾಟಕಕ್ಕೆ ಹಿಂದಿರುಗಿದಾಗ ಖಾಸಗಿ ಕ್ಷೇತ್ರದಲ್ಲೂ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆಯುಳ್ಳವರಿಗೆ ಬೇಡಿಕೆ ಇರಲಿಲ್ಲ. ಅಪ್ಲೈ ಮಾಡಿದ್ದೂ ಮಾಡಿದ್ದೇ, ರಿಪ್ಲೈ ಬಾರದ್ದೂ ಬಾರದ್ದೇ ಎಂಬ ಏಕತಾನತೆ ಮೂರು ತಿಂಗಳ ಕಾಲ ನನ್ನನ್ನು ನಿರಾಶೆಯ ಹೊಂಡಕ್ಕೆ ದೂಡಿತ್ತು.

ಅನಂತರ ಆರ್ಕಿಟೆಕ್ಟ್ 'ವೆಂಕಟರಮಣನ್ ಅಸೋಸಿಯೇಟ್ಸ್' ವತಿಯಿಂದ ಸಂದರ್ಶನಕ್ಕೆ ಕರೆ ಬಂತು. ಹೋದಾಗ 'ಆರು ತಿಂಗಳ ಅವಧಿಯ ಹುದ್ದೆಯೊಂದಿದೆ, ನಿರ್ವಹಿಸ್ತೀರಾ' ಎಂದು ಕೇಳಲಾಯಿತು. ನನ್ನ ಒಪ್ಪಿಗೆಯ ನಂತರ ಕಚೇರಿ ಟಿಪ್ಪಣಿಯೊಂದನ್ನು ಹಸ್ತಾಂತರಿಸಿ 'ಫಾದರ್ ಡಾಮಿನಿಕ್' ಅವರನ್ನು ನೇರವಾಗಿ ಸಂಪರ್ಕಿಸುವಂತೆ ಸಲಹೆ ನೀಡಲಾಯಿತು. ಆ ಮೇರೆಗೆ 'ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್' ಎಂಬಲ್ಲಿಗೆ ತೆರಳಿದಾಗ, 'ಅವರು ಸನ್ಯಾಸಿನಿಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ, ಅವರಿಗೋಸ್ಕರ ನೀವು ಒಂದೆರಡು ಗಂಟೆ ಕಾಲ ಕಾಯಲು ಸಿದ್ದರಿದ್ದರೆ ಒಳ್ಳೆಯದೇ. ಇಲ್ಲವಾದರೆ ಹೋಗಬಹುದು ಎಂದು ಸೂಚಿಸಲಾಯಿತು.

ನನಗೆ ಕೆಲಸ ಬೇಕಿತ್ತು. ಆ ನಿಮಿತ್ತ ಎಷ್ಟೇ ಹೊತ್ತಾದರೂ ಕಾಯುತ್ತ ಅಲ್ಲಿರಲು ನಾನು ಸಿದ್ಧನಾದೆ. ಮಟಮಟ ಮಧ್ಯಾಹ್ನ 12 ಗಂಟೆಗೆ ಅಲ್ಲಿಗೆ ಹೋದ ನಾನು ಫಾದರ್ ಡಾಮಿನಿಕ್ ಅವರೊಂದಿಗೆ ಮೌನವಾಗಿ ಮುಖಾಮುಖಿಯಾದದ್ದು ಇರುಳು ಪರಿಸರವನ್ನು ವ್ಯಾಪಿಸಿದ ನಂತರವೇ. ವೆಂಕಟರಮಣನ್ ರವಾನಿಸಿದ ಕಚೇರಿ ಟಿಪ್ಪಣಿಯನ್ನು ಓದಿದ ಅವರು, ನನ್ನ ಅವತಾರವಾದರೂ ಹೇಗಿದೆ ಎಂದು ತಿಳಿದುಕೊಳ್ಳಲು ಯತ್ನಿಸದೆ, 'ನಾಳೆಯಿಂದ ಈತ ಕೆಲಸಕ್ಕೆ ಬರಲಿ' ಎಂದು ಆ ಟಿಪ್ಪಣಿಯ ಮೇಲೆ ಬರೆದು ಕ್ಷಣಾರ್ಧದಲ್ಲಿ ಹಿಂದಿರುಗಿದರು! 'ಈ ಸಂಪತ್ತಿಗೆ ನಾನು ಎಂಟು ಗಂಟೆ ಕಾಲ ಕಾಯುತ್ತ ಇಲ್ಲಿರಬೇಕಿತ್ತೆ' ಎಂಬೋಣವು ಮನದಲ್ಲಿ ಸುಳಿಯಿತಾದರೂ, ಶಬ್ದವನ್ನು ಹೊರಬೀಳಲು ಬಿಡದೆ, 'ನನ್ನ ಕೆಲಸವಾಯಿತಲ್ಲ' ಎಂದು ಸಮಾಧಾನ ತಂದುಕೊಳ್ಳುತ್ತ ನಾನು ಅಲ್ಲಿಂದ ಕದಲಿದೆ.

ಆರಂಭದಲ್ಲಿ ಆರ್ಕಿಟೆಕ್ಟ್ ಸೂಚಿಸಿದ ಮೇರೆಗೆ ಸರಿಯಾಗಿ ಆರು ತಿಂಗಳಿಗೆ ಅಲ್ಲಿನ ಕೆಲಸ ಪೂರ್ಣಗೊಂಡು, ನಂತರ ನಾನು ನಿರುದ್ಯೋಗಿಯಾದೆ. ಆ ಆರೂ ತಿಂಗಳು ನಾನು ಸಲ್ಲಿಸಿದ ದೈನಿಕ ವರದಿಯ ಬಗ್ಗೆ ಪದೇಪದೇ ವೆಂಕಟರಮಣನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾ, ಅವರೇ ನನ್ನ ಮುಂದಿನ ಉದ್ಯೋಗಕ್ಕೆ ಹಾದಿ ತೋರಿಯಾರೆಂದು ಭ್ರಮಿಸುತ್ತ ಅವರ ಕಚೇರಿಗೆ ನಾನು ಎಡತಾಕಿದ್ದು ವ್ಯರ್ಥವಾಯಿತು. ಅವರನ್ನು ಬೆಂಗಳೂರು ಗಾಲ್ಫ್ ಕ್ಲಬ್ಬಿನ ಅಧ್ಯಕ್ಷ ಪದವಿಯು ಅರಸುತ್ತ ಬಂದ ನಿಮಿತ್ತ ಅವರು ಬೆಂಗಳೂರು ಫುಟ್ಬಾಲ್ ಗ್ರೌಂಡ್ ಸಮೀಪದಲ್ಲಿರುವ ತಮ್ಮ ಅಧಿಕೃತ ಕಚೇರಿಯನ್ನು  ಸುಪುತ್ರ ಆರ್ಕಿಟೆಕ್ಟ್ ನರೇಶ್ ವಹಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಏರ್ಪಡಿಸಿ ನಿರ್ಗಮಿಸಿದ್ದರು. ನರೇಶ್ ನನ್ನೊಂದಿಗೆ ಸಂಭಾಷಿಸಿ, 'ಅಗತ್ಯ ಏರ್ಪಟ್ಟಾಗ ಫೀಲ್ಡ್ ವರ್ಕಿಗೆ ಕರೆಯುತ್ತೇನೆ' ಎಂಬ ಆಶ್ವಾಸನೆ ನೀಡಿದರು. ಅವರ ಕಚೇರಿಯಲ್ಲಿ ಟೇಬಲ್ ವರ್ಕ್ ಕೇವಲ ಹೆಣ್ಣುಮಕ್ಕಳಿಗೆ ಮೀಸಲಾಗಿದ್ದ ನಿಮಿತ್ತ ನಾನು ನಿಷ್ಣಾತನಾಗಿದ್ದರೂ ಅ ಕೆಲಸವನ್ನು ಅವರು ನನಗೆ ವಹಿಸುವಂತಿರಲಿಲ್ಲ. ತತ್ಪರಿಣಾಮ, ಮತ್ತೆ ಮೊದಲಿಟ್ಟಿತು ನನ್ನ 'ಅಪ್ಲೈ ಅಪ್ಲೈ ಬಟ್ ನೋ ರಿಪ್ಲೈ' ದಿನಚರಿ!

ಆ ಮೇರೆಗೆ ಒಂದೆರಡು ತಿಂಗಳ ಸಮಯ ವ್ಯರ್ಥವಾದ ನಂತರ 'ವರದಿಗಾರರು ಬೇಕಾಗಿದ್ದಾರೆ, ನೇರವಾಗಿ ಭೇಟಿಯಾಗತಕ್ಕದ್ದು' ಎಂಬ 'ಸದರ್ನ್ ಹೆರಾಲ್ಡ್' ಪತ್ರಿಕೆಯ ಜಾಹಿರಾತು ನನ್ನನ್ನು ಆಕರ್ಷಿಸಿತು. ಆ ಜಾಹಿರಾತು, 'ನಿರುದ್ಯೋಗದ ಅವಧಿಯನ್ನು ಕುಗ್ಗಿಸಲು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರವನ್ನಷ್ಟೇ ನೆಚ್ಚಿಕೊಳ್ಳದೆ ಆಗೀಗ ಪತ್ರಿಕೆಗಳನ್ನೂ ಎಡತಾಕುವುದು ಲೇಸು' ಎಂದು ನನ್ನನ್ನು ಪ್ರೇರಿಸುತ್ತಿತ್ತು. ಪೀಣ್ಯದಲ್ಲಿದ್ದ ಆ ಪತ್ರಿಕೆಯ ಕಾರ್ಯಾಲಯದಲ್ಲಿ ಸಿ ಟಿ ಜೋಷಿಯವರ ನೇತೃತ್ವದಲ್ಲಿ ಸಂದರ್ಶನ ನಡೆಯುತ್ತಿತ್ತು. ಆಗ್ಗೆ ಪ್ರಕಟವಾಗಿದ್ದ ನನ್ನ 'ಮರುಭೂಮಿ' ಕಾದಂಬರಿಯ ಪ್ರತಿ, ಉದಯವಾಣಿ ಪತ್ರಿಕೆಯು ಪ್ರಕಟಿಸಿದ್ದ ನನ್ನ ವಾರದ ಕತೆಗಳ ಬಂಚ್ ಹಾಗೂ ಮುಂಬೈಯಲ್ಲಿ ಪ್ರಕಟವಾಗಿದ್ದ ಅಂಕಣ 'ರಂಗನ ದಿನಚರಿ' ಕ್ಲಿಪಿಂಗ್ಸನ್ನು ಅವರ ಮುಂದಿಟ್ಟೆ. ಅವುಗಳತ್ತ ಒಂದು ಕ್ಷಣ ಕಣ್ಣಾಡಿಸಿದ ಅವರು 'ಒಂದು A4 ಸೈಜಿನ ಹಾಳೆಯಲ್ಲಿ ನೀವು ಇದುವರೆಗೆ ನಡೆದು ಬಂದ ದಾರಿ ಕುರಿತು ಬರೆಯಿರಿ, ಆನಂತರ ನೋಡೋಣ' ಎಂದರು.

ಆ ಪರೀಕ್ಷೆಯಲ್ಲಿ ನಾನು ಗೆದ್ದು, 'ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಇಲ್ಲದಿದ್ದಾಗ ಜೀವನಪಾಯಕ್ಕಾಗಿ ಆಗಿಂದಾಗ್ಗೆ ಪತ್ರಿಕೋದ್ಯಮವನ್ನೂ ನಾನು ಆಶ್ರಯಿಸಬಹುದು' ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆ.

No comments:

Post a Comment