Friday 23 February 2024

ಬದುಕಿನ ಹಾದಿ - 4

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಯಾರನ್ನೂ ನಿಷ್ಪ್ರಯೋಜಕ ಎಂದು ಪರಿಗಣಿಸಬೇಡಿ. ಏಕೆಂದರೆ ಫಲ ನೀಡದ ಮರವೂ ಸಹ ನಮಗೆ ನೆರಳನ್ನು ನೀಡುವುದು ನಿಶ್ಚಿತ.

ಕಡೆಗಣಿಕೆ, ಅರ್ಥಾತ್ ತಾತ್ಸಾರದಿಂದ ಕಾಣುವ ಮುಖೇನ ಯಾವುದೇ ಸತ್ಪರಿಣಾಮವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮತ್ತೆಯೋರ್ವರು ತೀವ್ರವಾಗಿ ಕಡೆಗಣಿಸಲ್ಪಟ್ಟು ಚಿಕ್ಕ ವಯಸ್ಸಿನಲ್ಲೇ ಅಸು ನೀಗಿದರು. ತಾತ್ಸಾರಕ್ಕೆ ಗುರಿಯಾದ ನಮ್ಮಪ್ಪ ಮತ್ತು ಚಿಕ್ಕಪ್ಪ ವಿದ್ಯಾರ್ಥಿಗಳಾಗಿರಬೇಕಾದ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ ಸಮಸ್ತ ಭಾರತದ ಬೀದಿಬೀದಿಗಳನ್ನು ಸುತ್ತುತ್ತ ಕಂಡಕಂಡ ಕಸುಬುಗಳನ್ನೆಸಗುತ್ತಾ ಕಾಲ ಕಳೆದರು.

ನಮ್ಮ ಕುಟುಂಬದಲ್ಲಿ ನಮ್ಮಪ್ಪ ಮತ್ತು ಚಿಕ್ಕಪ್ಪನ ನಡುವೆ ಇಂದಿರಾ ಮತ್ತು ಲೀಲಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದರಂತೆ. ಮದುವೆಯ ಮುನ್ನ ಅಡುಗೆ ಮತ್ತು ಮನೆ ಕೆಲಸವನ್ನು ಅವರಿಬ್ಬರೂ ಹಂಚಿಕೊಂಡು ಮಾಡುತ್ತಿದ್ದ ನಿಮಿತ್ತ, ಇಡೀ ಮನೆ ಒಂದಿಷ್ಟೂ ಧೂಳಿರದೆ ಕಣ್ಣುಗಳಿಗೆ ಹಬ್ಬವುಂಟುಮಾಡುವುದರ ಜೊತೆಗೆ ಮನೆಯವರೆಲ್ಲರಿಗೂ ಪ್ರತಿದಿನ ಸ್ವಾದಿಷ್ಟವಾದ ಮೃಷ್ಟಾನ್ನವನ್ನು ಸವಿಯುವ ಅವಕಾಶ ಪ್ರಾಪ್ತವಾಗುತ್ತಿತ್ತು.

ಆ ಬಾಲೆಯರ ಪೈಕಿ ಇಂದಿರಾ ಮದುವೆಯಾಗಿ, ಕಾವ್ಯವಾಚನಕ್ಕೆ ಹೆಸರುವಾಸಿಯಾಗಿದ್ದ ಕುಟುಂಬವೊಂದರ ಸೊಸೆಯಾಗಿ ತೆರಳಿದಳು. ಸಮಯ ಕಳೆದಂತೆ ಕಾರ್ಯತತ್ಪರ ಇಂದಿರಾಗೆ ಪತಿಗೃಹದಲ್ಲಿ ಎಡೆಬಿಡದೆ ಸಾಗುತ್ತಿದ್ದ ಗಮಕಾಭ್ಯಾಸದ ತರಂಗಗಳು ಚಿಟ್ಟು ಹಿಡಿಸತೊಡಗಿದವು. ಒಂದು ದಿನ ಮಧ್ಯಾಹ್ನ ಯಾರೂ ಮನೆಯಲ್ಲಿ ಇಲ್ಲದಿದ್ದಾಗ, ಗಮಕ ಕುರಿತು ಅವಳ ಮನದಲ್ಲೆದ್ದ ಕ್ರೋಧವು ಅಲ್ಲಿದ್ದ ಒಂದಷ್ಟು ಅಭ್ಯಾಸ ಪುಸ್ತಕಗಳ ಕಡೆಗೆ ಹರಿಹಾಯ್ದಿತು. ಇಂದಿರಾ ಅವುಗಳನ್ನೆತ್ತಿ ತಂದು ಮನೆಯ ಮುಂದೆ ಮೋರಿಯಲ್ಲಿ ರಭಸದಿಂದ ಹರಿಯುತ್ತಿದ್ದ ನೀರಿನೊಳಕ್ಕೆ ಸುರಿದಳು. ಕ್ಷಣಾರ್ಧದೊಳಗೆ ಆ ಪುಸ್ತಕಗಳು ಪ್ರವಾಹದಲ್ಲಿ ಮಾಯವಾದವು.

ನಂತರ ಮನೆಯವರು ವಿಚಾರಿಸಿದಾಗ ಎಲ್ಲವನ್ನೂ ಇದ್ದುದಿದ್ದಂತೆ ವಿವರಿಸಿದ ಇಂದಿರಾ, ಆವೇಶದ ಭರದಲ್ಲಿ ಹಾಗೆ ಮಾಡಿದೆನೆಂದಳು. ಆಗ ಮನೆಯವರಲ್ಲಿ ಸೊಸೆಯ ಮೇಲಿನ ಮಮಕಾರ ಮಾಯವಾಗಿ ಆ ಸ್ಥಾನವನ್ನು ತಾತ್ಸಾರ ಅವರಿಸಿತು. 'ಗಮಕ ನಿನಗೆ ಬೇಡವೆಂದರೆ ನೀನೂ ನಮಗೆ ಬೇಡ' ಎನ್ನುತ್ತಾ ಅವಳ ಗಂಡ ಮೊದಲುಗೊಂಡು ಮನೆಯವರೆಲ್ಲರೂ ಅವಳನ್ನು ಮನೆಯಿಂದಾಚೆಗೆ ದಬ್ಬಿದರು! ಅಜರಾಮರವೆಂದು ಹೊಗಳಿಸಿಕೊಳ್ಳುವ ಗಂಡ - ಹೆಂಡಿರ ಪ್ರೇಮ ಅಷ್ಟೊಂದು ಕ್ಷುಲ್ಲಕ ರೀತಿಯಲ್ಲಿ ಆ ಕುಟುಂಬದಲ್ಲಿ, ಭಾರತಕ್ಕೆ ಸ್ವತಂತ್ರ ಲಭಿಸಿದ ಹೊಚ್ಚಹೊಸತರಲ್ಲಿಯೇ ನುಚ್ಚುನೂರಾಗಿದ್ದು ಅನಿರೀಕ್ಷಿತ.

ರಸ್ತೆಗೆ ಬಂದು ಬಿದ್ದ ಇಂದಿರಾಳ ಮೇಲೆ ಅಪ್ಪಳಿಸಿದವು, ಮನೆಯಿಂದ ತೂರಲ್ಪಟ್ಟ ಅವಳ ಬಟ್ಟೆಬರೆಗಳು! ದಿಕ್ಕು ತೋಚದೆ ಅವಳು ಗಂಟೆಗಟ್ಟಲೆ ಅಲ್ಲಿಂದ ಕದಲಲಿಲ್ಲ, ಆದರೂ ಆ ನಿರ್ದಯಿ ಮನೆಯ ಬಾಗಿಲು ತೆರೆಯಲಿಲ್ಲ, ಆ ಮನೆಯೊಳಕ್ಕೆ ಮತ್ತೊಮ್ಮೆ ಕಾಲಿಡಲು ಅವಳಿಗೆ ಸಾಧ್ಯವಾಗಲಿಲ್ಲ. ಅಂದಿನ ನೀರೆಯರಿಗೆ, ಇಂದು ಹೆಣ್ಣುಮಕ್ಕಳಿಗೆ ಸ್ವತಂತ್ರವಾಗಿ ನೆಲೆಯೂರಲು ಲಭಿಸುತ್ತಿರುವಂಥ ಅವಕಾಶಗಳನ್ನು ಕನಸಿನಲ್ಲಿಯೂ ನೆನೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಕಣ್ಣೀರು ಹಾಕುತ್ತ ತವರಿಗೆ ಹಿಂದಿರುಗಿದ ಇಂದಿರಾಳ ಸಮ್ಮುಖದಲ್ಲಿ ಅವಳ ಅಪ್ಪನ ರೂಪದಲ್ಲಿದ್ದ ಬ್ರಹ್ಮರಾಕ್ಷಸ (ನಮ್ಮಜ್ಜ - ಅಪ್ಪನ ಅಪ್ಪ) ಪ್ರತ್ಯಕ್ಷನಾದ! ದುಃಖಾತಿರೇಕರೇಕದೊಂದಿಗೆ ಸ್ವಪುತ್ರಿಯಾದ ಇಂದಿರಾ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಆ ಪಾಪಿ ಕಿಂಚಿತ್ತಾದರೂ ಮರುಕವಿಲ್ಲದೆ, 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗು. ಆದ್ದರಿಂದ ನೀನು ಇಲ್ಲಿಂದ ತೊಲಗು' ಎಂದು ಅಬ್ಬರಿಸಿದ. ಆ ಅಯೋಗ್ಯನ ವರ್ತನೆ ಸಹ್ಯವಾಗದೆ, ಮಗಳ ಕಷ್ಟವನ್ನು ಕಣ್ತುಂಬಿಕೊಳ್ಳಲಾರದೆ ನಮ್ಮಜ್ಜಿ ಮಧ್ಯೆ ಪ್ರವೇಶಿಸಿದರು. ಅವರನ್ನೂ ಒದ್ದು ಮೂಲೆಗೆ ತಳ್ಳಿದ ನಮ್ಮಜ್ಜ. ದಬ್ಬಾಳಿಕೆ ಆ ದಿನಗಳಲ್ಲಿ ಅದಿನ್ನೆಷ್ಟು ಪ್ರಚಂಡವಾಗಿತ್ತು ಎಂಬುದನ್ನು ಊಹಿಸಿಕೊಳ್ಳಿ!

ನಮ್ಮಜ್ಜ ಯಾರ ಮಾತಿಗೂ ಜಗ್ಗದೆ, ಇಂದಿರಾಳನ್ನು ದೂರೀಕರಿಸಿಯೇ ಸಿದ್ದವೆಂಬ ವಿಕೃತ ಸಂಕಲ್ಪದಲ್ಲಿದ್ದ. ಆದರೆ ನಮ್ಮಜ್ಜಿಯ ಮನಸ್ಸು ತಡೆಯಲಿಲ್ಲ. ಸಮೀಪದಲ್ಲಿಯೇ ಒಂದು ಕೋಣೆಯನ್ನು ಬಾಡಿಗೆಗೆ ಗೊತ್ತುಮಾಡಿ ಮಗಳನ್ನು ಅದರಲ್ಲಿರಿಸಿದರು. ಉಪಹಾರ ಮತ್ತು ಊಟವನ್ನು ಅಜ್ಜನ ಕಣ್ಣು ತಪ್ಪಿಸಿ ತಂದು ಅವಳಿಗೆ ಊಡಿಸಿ, ಅವಳು ಬದುಕಿನ ಮೇಲೆ ಮತ್ತೆ ವಿಶ್ವಾಸ ಹೊಂದುವಂತೆ ಮಾಡಲು ಶತಪ್ರಯತ್ನ ನಡೆಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಇನ್ನಿಲ್ಲದಂತೆ ನಲುಗಿಹೋಗಿದ್ದ ಇಂದಿರಾ ಸಂಪೂರ್ಣವಾಗಿ ಅನ್ನ ನೀರು ತ್ಯಜಿಸಿದ್ದರಿಂದ, ಪ್ರಪಂಚವನ್ನೇ ಸರಿಯಾಗಿ ನೋಡಿರದ ತನ್ನ 20 - 21ರ ವಯೋಮಾನದಲ್ಲಿ, ಕೆಲವೇ ದಿನಗಳೊಳಗೆ ಇನ್ನಿಲ್ಲವಾದಳು.

No comments:

Post a Comment